ಕೆಟ್ಟುನಿಂತ ಸೋಲಾರ್ ಪ್ಲಾಂಟ್ಗಳು > ಕಷ್ಟ ಆಲಿಸದ ಸೆಸ್ಕ್ ಅಧಿಕಾರಿಗಳು
ಯಳಂದೂರು: ತಾಲೂಕಿನ ಬಿಆರ್ಟಿ ಹುಲಿ ಸಂರಕ್ಷಿತ ಯೋಜನೆ ಪ್ರದೇಶ ವ್ಯಾಪ್ತಿಯ ಪುರಾಣಿ ಪೋಡಿನಲ್ಲಿ ಎರಡು ತಿಂಗಳಿಂದ ಸೋಲಾರ್ ಪ್ಲಾಂಟ್ ಕೆಟ್ಟಿರುವುದರಿಂದ ಜನರು ಕಗ್ಗತ್ತಲಲ್ಲಿ ಜೀವನ ಸಾಗಿಸಬೇಕಾದ ದುಸ್ಥಿತಿ ನಿರ್ಮಾಣವಾಗಿದೆ…!
ಬಿಳಿಗಿರಿರಂಗನಾಥಬೆಟ್ಟ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ಈ ಪೋಡಿನಲ್ಲಿ ಸುಮಾರು 120ಕ್ಕೂ ಹೆಚ್ಚು ಕುಟುಂಬಗಳು ವಾಸಿಸುತ್ತಿವೆ. ಪ್ರದೇಶವು ಹುಲಿ ರಕ್ಷಿತ ಪ್ರದೇಶ ವ್ಯಾಪ್ತಿ ಜತೆಗೆ ವಿದ್ಯುತ್ ಸಂಪರ್ಕ ಇಲ್ಲದೇ ಜೀವನ ಸಾಗಿಸುತ್ತಿದ್ದರು, 2015-16 ನೇ ಸಾಲಿನಲ್ಲಿ ದೀನ್ದಯಾಳ್ ಉಪಾಧ್ಯಾಯ ಗ್ರಾಮ ಜ್ಯೋತಿ ಯೋಜನೆಯಡಿ ಸುಮಾರು 1.15 ಕೋಟಿ ರೂ.ವೆಚ್ಚದಲ್ಲಿ ಸೋಲಾರ್ ವಿದ್ಯುತ್ ಸಂಪರ್ಕವನ್ನು ಮನೆಗಳಿಗೆ ಕಲ್ಪಿಸಲಾಗಿತ್ತು, ಆದರೆ ಕಳೆದ ಸೆಪ್ಟೆಂಬರ್ನಲ್ಲಿ ಸೋಲಾರ್ ವಿದ್ಯುತ್ ಪ್ಲಾಂಟ್ ಕೆಟ್ಟುಹೋಗಿದೆ. ಈ ಬಗ್ಗೆ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು, ಮೇಲಧಿಕಾರಿಗಳ ಗಮನಕ್ಕೆ ತಂದರೂ ಗಮನಹರಿಸುತ್ತಿಲ್ಲ ಎಂಬುದು ಸೋಲಿಗರ ಆರೋಪ.
ತಿರುಗಿ ನೋಡದ ಕೆಇಬಿ: ಎರಡು ತಿಂಗಳಿಂದ ಕಗ್ಗತ್ತಲಲ್ಲಿ ಜೀವನ ಸಾಗಿಸುವ ಪುರಾಣಿ ಪೋಡಿನ ನಿವಾಸಿಗಳಿಗೆ ರಾತ್ರಿ ವೇಳೆ ಸಂಜೆ 6 ರಿಂದ ಬೆಳಗ್ಗೆ 6 ಗಂಟೆ ವರಗೆ ಸೋಲಾರ್ ವಿದ್ಯುತ್ ಸೌಕರ್ಯವನ್ನು ಕಲ್ಪಿಸಲಾಗಿತ್ತು, ಆದರೆ ಸೋಲಾರ್ ಕೆಟ್ಟು ಹೋಗಿರುವ ಬಗ್ಗೆ ಸಂಬಂಧಪಟ್ಟ ಯಳಂದೂರು ಕೆಇಬಿ ಇಲಾಖೆ ಅಧಿಕಾರಿಗಳಿಗೆ ಗಮನಕ್ಕೆ ತಂದರೂ ದುರಸ್ತಿಪಡಿಸಲು ಮೀನಮೇಷ ಎಣಿಸುತ್ತಿದ್ದಾರೆ. ಕಗ್ಗತ್ತಲಿನಲ್ಲಿ ಜೀವನ ಕಳೆಯುವಂತಹ ಪರಿಸ್ಥಿತಿ ಬಂದಿದೆ, ಆದ್ದರಿಂದ ಸಂಬಂಧಪಟ್ಟ ಅಧಿಕಾರಿಗಳು ತಕ್ಷಣ ಗಮನಹರಿಸಬೇಕೆಂದು ನಿವಾಸಿಗಳು ಆಗ್ರಹಿಸಿದ್ದಾರೆ.
ಕಾಡು ಪ್ರಾಣಿಗಳ ಕಾಟ : ಕಾನನದಲ್ಲಿ ಸೋಲಾರ್ ದೀಪ ಉರಿಯುತ್ತಿದ್ದರೆ ಕಾಡುಪ್ರಾಣಿ ಹಾವಳಿ ಕಡಿಮೆ ಇರುತ್ತದೆ. ಇತ್ತೀಚಿಗೆ ಸೋಲಾರ್ ಕೆಟ್ಟಿರುವುದರಿಂದ ಆನೆ, ಕರಡಿ, ಹುಲಿ, ಚಿರತೆ ಸೇರಿದಂತೆ ಕಾಡು ಪ್ರಾಣಿಗಳು ಹೆಚ್ಚು ಸಂಚರಿಸುತ್ತಿದ್ದು, ಇದರಿಂದ ರಾತ್ರಿ ವೇಳೆ ಮಕ್ಕಳು, ಹಿರಿಯರು, ಸಂಚರಿಸಲು ಭಯವಾಗುತ್ತಿದೆ. ಜತೆಗೆ ಪೋಡಿನಲ್ಲಿ ನಿವಾಸಿಗಳು ಒಂದು ಕಡೇ ಸ್ಥಳದಲ್ಲಿ ವಾಸಿಸುತ್ತಿಲ್ಲ ಒಂದು ಮನೆಯಿಂದ ಮತ್ತೊಂದು ಮನೆಗೆ ಸಾಕಷ್ಟು ಸಾಕಷ್ಟು ಅಣತರವಿದೆ. ಈ ಸಮಯದಲ್ಲಿ ಸ್ವಲ್ಪ ಎಚ್ಚರವಹಿಸಿಸದೆ ಹೋದರೆ ಅಪಾಯ ಕಟ್ಟಿಟ್ಟ ಬುತ್ತಿ.
ಕಳೆದ 2 ತಿಂಗಳಿಂದ ಪೋಡಿನಲ್ಲಿ ಸೋಲಾರ್ ಕೆಟ್ಟಿ ಹೋಗಿರುವ ಬಗ್ಗೆ ಸಂಬಂಧಪಟ್ಟ ಕೆಇಬಿ ಇಲಾಖೆ ಅಧಿಕಾರಿಗಳಿಗೆ ಗಮಕ್ಕೆ ತಂದಿದ್ದರು ಯಾವುದೇ ಕ್ರಮವಹಿಸುತ್ತಿಲ್ಲ, ಇದರಿಂದ ರಾತ್ರಿ ವೇಳೆ ವಿದ್ಯಾರ್ಥಿಗಳ ಕಲಿಕೆ, ಮಹಿಳೆ ಹಾಗೂ ಹಿರಿಯ ನಾಗರೀಕರಿಗೆ ಹೊರ ಬರುವುದಕ್ಕೆ ಭಯವಾಗುತ್ತದೆ. ತಕ್ಷಣ ವಿದ್ಯುತ್ ಪೂರೈಕೆ ಮಾಡುವ ನಿಟ್ಟಿನಲ್ಲಿ ಕ್ರಮವಹಿಸಬೇಕಾಗಿದೆ, ಇಲ್ಲವಾದರೆ ಪ್ರತಿಭಟನೆ ಮಾಡಬೇಕಾಗುತ್ತದೆ.
ದಾಸ ಪುರಾಣಿಪೋಡಿನ ನಿವಾಸಿ
ಬಿಳಿಗಿರಿರಂಗನಬೆಟ್ಟ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪುರಾಣಿ ಪೋಡಿನಲ್ಲಿ ಸೋಲಾರ್ ಕೆಟ್ಟಿ ಹೋಗಿರುವ ಬಗ್ಗೆ ಕೂಡಲೇ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ದುರಸ್ತಿಪಡಿಸುವ ನಿಟ್ಟಿನಲ್ಲಿ ಗಮನಹರಿಸಲಾಗುವುದು.
ನಿಂಗರಾಜು ಎಇಇ, ಸೆಸ್ಕ್ ಯಳಂದೂರು