ಬಸವಕಲ್ಯಾಣ: ಪ್ರತ್ಯೇಕ ಕೃಷಿ ಬಜೆಟ್ ಮಂಡಿಸಿದ ಮಾದರಿಯಲ್ಲಿ ಬರುವ ದಿನಗಳಲ್ಲಿ ಕಲ್ಯಾಣ ಕರ್ನಾಟಕ ಭಾಗದ ಸಮಗ್ರ ಅಭಿವೃದ್ಧಿಗಾಗಿ ಪ್ರತ್ಯೇಕ ಬಜೆಟ್ ಮಂಡಿಸುವಂತೆ ಮಾಜಿ ಶಾಸಕ ಮಲ್ಲಿಕಾರ್ಜುನ ಖೂಬಾ ಆಗ್ರಹಿಸಿದ್ದಾರೆ.
ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಪತ್ರ ಬರೆದ ಅವರು, ಈ ಭಾಗದ ಸಮಗ್ರ ಅಭಿವೃದ್ಧಿಗಾಗಿ ಪ್ರತ್ಯೇಕ ಬಜೆಟ್ ಮಂಡನೆ ಅಗತ್ಯವಿದೆ. ಇದರೊಂದಿಗೆ ಪ್ರತಿವರ್ಷ ಮೂರು ಸಲ ಕಲಬುರಗಿಯಲ್ಲಿ ಸಚಿವ ಸಂಪುಟ ಸಭೆ ನಡೆಸಬೇಕು. ಪ್ರತ್ಯೇಕ ಸಚಿವಾಲಯ ಸ್ಥಾಪಿಸಬೇಕೆಂದು ಗಮನ ಸೆಳೆದಿದ್ದಾರೆ.
ಈ ಭಾಗದ ಜಿಲ್ಲೆಗಳಲ್ಲಿ ಖಾಲಿಯಿರುವ 50 ಸಾವಿರ ಹುದ್ದೆಗಳನ್ನು 371(ಜೆ) ಅಡಿ ಭರ್ತಿ ಮಾಡಲು ಹಿಂದೆ ಕಲಬುರಗಿಯಲ್ಲಿ ನಡೆದಿದ್ದ ಸಚಿವ ಸಂಪುಟ ಸಭೆಯಲ್ಲಿ ನಿರ್ಧರಿಸಲಾಗಿತ್ತು. ಆದರೆ ಇನ್ನೂ ಈ ಪ್ರಕ್ರಿಯೆ ನಡೆದಿಲ್ಲ. ಕೂಡಲೇ ಖಾಲಿ ಇರುವ ಹುದ್ದೆ ಭರ್ತಿ ಮಾಡಿಕೊಳ್ಳಬೇಕು. ನಿರುದ್ಯೋಗಿಗಳ ಕೈಗೆ ಕೆಲಸ ಕೊಟ್ಟು ಜನ ಗುಳೇ ಹೋಗುವುದನ್ನು ತಪ್ಪಿಸಲು ಕೈಗಾರಿಕೆಗಳ ಸ್ಥಾಪನೆಗೆ ಆದ್ಯತೆ ಕೊಡಬೇಕು. ಬಂಡವಾಳ ಹೂಡಿಕೆದಾರಿಗೆ ಸೌಲಭ್ಯ ಒದಗಿಸಿ ಉದ್ದಿಮೆ ಸ್ಥಾಪಿಸಲು ಮತ್ತು ಪ್ರೋತ್ಸಾಹಿಸಲು ಹೊಸ ಕೈಗಾರಿಕೆ ನೀತಿ ಜಾರಿಗೆ ತರಬೇಕು ಎಂದು ಆಗ್ರಹಿಸಿದ್ದಾರೆ.
ನೀರಿನ ಸಮಸ್ಯೆ ನಿವಾರಿಸಲು ಭೀಮಾ, ಕೃಷ್ಣಾ, ಮಲಪ್ರಭಾ ನದಿ ಜೋಡಿಸಬೇಕು. ಕಲ್ಯಾಣ ಕರ್ನಾಟಕ ಜಿಲ್ಲೆಗಳಿಗೆ ಸಂಬಂಧಿಸಿದ ಕೆಲ ಇಲಾಖೆ, ನಿಗಮ ಮತ್ತು ಮಂಡಳಿಗಳನ್ನು ಸ್ಥಳಾಂತರ ಮಾಡಬೇಕು. ಈ ಭಾಗದ ಜಿಲ್ಲೆಗಳಿಗೆ ಸಂಬಂಧಪಟ್ಟವರಿಗೆ ಮಾತ್ರ ಜಿಲ್ಲಾ ಉಸ್ತುವಾರಿ ಸಚಿವರನ್ನಾಗಿ ನೇಮಿಸಿ ಅವರು ಪ್ರತಿ ತಿಂಗಳು ಕಡ್ಡಾಯ ಪ್ರಗತಿ ಪರಿಶೀಲನೆ ಮಾಡುವ ನಿಯಮ ಜಾರಿಗೆ ತರಲು ಆಗ್ರಹಿಸಿದ್ದಾರೆ.