ಕೆ.ಆರ್.ಪೇಟೆ: ಒತ್ತಡದ ಜೀವನ ಹಾಗೂ ಆಹಾರ ಕ್ರಮದಿಂದ ಆರೋಗ್ಯ ಸಮಸ್ಯೆ ಕಾಡುತ್ತಿದ್ದು, ಪ್ರತಿಯೊಬ್ಬರೂ ಎರಡು-ಮೂರು ತಿಂಗಳಿಗೊಮ್ಮೆ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕು ಎಂದು ಸಮಾಜ ಸೇವಕ ಹಾಗೂ ಆರ್ಟಿಒ ಅಧಿಕಾರಿ ಮಲ್ಲಿಕಾರ್ಜುನ್ ಸಲಹೆ ನೀಡಿದರು.
ತಾಲೂಕು ಹೆಮ್ಮನಹಳ್ಳಿ ಗ್ರಾಮದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಪ್ರಗತಿಬಂಧು ಸ್ವಸಹಾಯ ಸಂಘಗಳ ಒಕ್ಕೂಟ ಹಾಗೂ ಕಾವೇರಿ ಕಣ್ಣಿನ ಆಸ್ಪತ್ರೆ ಸಹಯೋಗದೊಂದಿಗೆ ಇತ್ತೀಚೆಗೆ ಆಯೋಜಿಸಿದ್ದ ಉಚಿತ ಕಣ್ಣಿನ ತಪಾಸಣಾ ಶಿಬಿರ ಉದ್ಘಾಟಿಸಿ ಮಾತನಾಡಿದರು.
ಕಣ್ಣು ಸೂಕ್ಷ್ಮವಾದ ಅಂಗ. ಇದನ್ನು ಜಾಗರೂಕತೆಯಿಂದ ಕಾಪಾಡಿಕೊಳ್ಳಬೇಕು. ಜತೆಗೆ ಆರೋಗ್ಯವಂತ ಸಮಾಜಕ್ಕಾಗಿ ಆಯೋಜಿಸಿರುವ ಕಣ್ಣಿನ ತಪಾಸಣೆ ಶಿಬಿರದ ಅನುಕೂಲ ಪಡೆಯಬೇಕು. ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯು ಸದಸ್ಯರಿಗೆ ಆರ್ಥಿಕ ಸಹಕಾರ ನೀಡುವುದರೊಂದಿಗೆ ವ್ಯವಹಾರದ ಶಿಸ್ತು, ಸಂಸಾರ ನಿರ್ವಹಣೆ ಹಾಗೂ ಸಂಸ್ಕಾರಯುತ ಜೀವನ ಮೌಲ್ಯಗಳನ್ನು ಕಲಿಸಿಕೊಡುತ್ತಿದೆ. ಸಂಸ್ಥೆಯ ಹಲವಾರು ಕಾರ್ಯಕ್ರಮಗಳು ಸಮಾಜದ ದುರ್ಬಲ ವರ್ಗದವರಿಗೆ ಆಶಾಕಿರಣವಾಗಿದೆ ಎಂದರು.
ಯೋಜನೆ ಜಿಲ್ಲಾ ನಿರ್ದೇಶಕ ಕೇಶವ ದೇವಾಂಗ ಮಾತನಾಡಿ, ವೃದ್ಧರಲ್ಲಿ ಹೆಚ್ಚಾಗಿ ಕಣ್ಣಿನ ಪೊರೆ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಹೀಗಾಗಿ, ಕಣ್ಣಿನ ಸಮಸ್ಯೆ ಇರುವವರ ಅನುಕೂಲಕ್ಕೆ ಶಿಬಿರವನ್ನು ಆಯೋಜಿಸಲಾಗಿದೆ ಎಂದು ತಿಳಿಸಿದರು.
ಯೋಜನೆಯ ತಾಲೂಕು ಅಧಿಕಾರಿ ಮಮತಾ ಶೆಟ್ಟಿ, ಕಾವೇರಿ ಕಣ್ಣಿನ ಆಸ್ಪತ್ರೆ ಮುಖ್ಯ ನಿರ್ವಹಣಾಧಿಕಾರಿ ಈರಣ್ಣಯ್ಯ, ಜ್ಞಾನ ವಿಕಾಸ ಸಮನ್ವಯ ಸಮಿತಿ ಅಧಿಕಾರಿ ಕಾವ್ಯಾ, ಮೇಲ್ವಿಚಾರಕಿ ಮಮತಾ ಇತರರು ಇದ್ದರು.