ಶಿರಸಿ: ತಾಲೂಕಿನ ಬನವಾಸಿಯ ಕೆಲ ಕಡೆಗಳಲ್ಲಿ ಅಡಕೆ ತೋಟದ ನಡುವೆ ಬೆಳೆದಿರುವ ಕಾಳುಮೆಣಸು ಬಳ್ಳಿಗಳು ಒಣಗಿರುವುದು ರೈತರ ಆತಂಕಕ್ಕೆ ಕಾರಣವಾಗಿದೆ.
ಇಲ್ಲಿನ ವಿಜಯಕುಮಾರ ಹಲ್ಮಠ ಅವರ ತೋಟದಲ್ಲಿ ನೂರಾರು ಮೆಣಸಿನ ಬಳ್ಳಿಗಳು ಸಂಪೂರ್ಣ ಒಣಗಿ ನಿಂತಿವೆ. ಮುಂಗಾರಿನಲ್ಲಿ ಸುರಿದ ಅತಿಯಾದ ಮಳೆಯ ಪರಿಣಾಮ ಈಗ ಕಾಣಿಸಿಕೊಳ್ಳುತ್ತಿದೆ. ಅತಿವೃಷ್ಟಿಯಿಂದ ಮಣ್ಣು ಜವಳಾಗಿ ಕಾಳುಮೆಣಸು ಬಳ್ಳಿಗಳಿಗೆ ಪೆಟ್ಟು ಬಿದ್ದಿದ್ದು, ಇದೀಗ ಎಲ್ಲ ಬಳ್ಳಿಗಳು ಒಣಗುತ್ತಿವೆ. ಇವರದೊಂದೇ ತೋಟದಲ್ಲಿ ವಾರ್ಷಿಕ ಇಳುವರಿಗಿಂತ ಮೂರು ಕ್ವಿಂಟಾಲ್ನಷ್ಟು ಕಾಳುಮೆಣಸು ಇಳುವರಿ ಕಡಿಮೆಯಾಗುವ ಸಾಧ್ಯತೆಯಿದೆ. ಇದರಿಂದ ಲಕ್ಷಾಂತರ ರೂಪಾಯಿ ನಷ್ಟವಾಗಿದೆ. 15 ಎಕರೆಯಲ್ಲಿ 500 ಮಾವಿನ ಮರಗಳಿದ್ದು, ಇವು ಸಹ ಈ ಬಾರಿ ಹೂ ಬಿಟ್ಟಿಲ್ಲ. ಮಾವಿನಿಂದ ಬರುವ ಉಪ ಆದಾಯಕ್ಕೂ ತೊಂದರೆಯಾಗಿದೆ.
ಕಲ್ಲಂಗಡಿ ಕೇಳುವವರಿಲ್ಲ: ನರೂರಿನಲ್ಲಿ ಮೂರು ಎಕರೆಯಲ್ಲಿ ಕಲ್ಲಂಗಡಿ ನಾಟಿ ಮಾಡಿದ್ದ ಅರುಣ ಮಂಜಪ್ಪ ನಾಯ್ಕ ಅವರು, ಹಣ್ಣಾಗಿರುವ ಕಲ್ಲಂಗಡಿ
ಯನ್ನು ಕೊಳ್ಳುವವರಿಲ್ಲದೇ ಕಂಗಾಲಾಗಿದ್ದಾರೆ. ಕರೊನಾ ವೈರಸ್ನ ಭಯದಿಂದ ಸುತ್ತಮುತ್ತಲಿನ ಹಳ್ಳಿಗಳಿಗೆ ತಲೆಮೇಲೆ ಹೊತ್ತು ಹಣ್ಣು ಮಾರಾಟಕ್ಕೆ ಹೋದರೂ ಜನರು ಖರೀದಿಸಲು ಹಿಂದೇಟು ಹಾಕುತ್ತಿದ್ದಾರೆ. ಕಲ್ಲಂಗಡಿ ಒಮ್ಮೇಲೆ ಹಣ್ಣಾಗುವ ಬೆಳೆಯಾಗಿದ್ದು, ಖರೀದಿಸುವವರಿಲ್ಲದೇ ಕೊಳೆಯುತ್ತಿದೆ. ಇದರಿಂದ ಲಕ್ಷಾಂತರ ರೂಪಾಯಿ ನಷ್ಟವಾಗಿದೆ.
2019ರಲ್ಲಿ ಬಿದ್ದ ಅತಿಯಾದ ಮಳೆಯ ಪರಿಣಾಮ ಈಗ ಕಾಳುಮೆಣಸು ಬಳ್ಳಿಗಳ ಮೇಲಾಗಿದೆ. ಎಲ್ಲವೂ ಒಣಗುತ್ತಿವೆ. ಈ ಹಿಂದೆ ಬಳ್ಳಿಗಳಿಗೆ ಸುಣ್ಣ, ರಾಸಾಯನಿಕ ಸಿಂಪಡಣೆ ಮಾಡಿದ್ದರೂ ಪ್ರಯೋಜನ ಕಂಡಿಲ್ಲ. ಲಕ್ಷಾಂತರ ರೂಪಾಯಿ ನಷ್ಟವಾಗಿದೆ.
| ವಿಜಯಕುಮಾರ ಹಲ್ಮಠ, ಬೆಳೆಗಾರ