ಪಾಂಡವಪುರ: ಕಳೆದ ಎರಡು ದಶಕಗಳಿಂದ ವೀರಶೈವ ಲಿಂಗಾಯತ ಸಮುದಾಯದ ಮತ ಪಡೆದ ರಾಜಕಾರಣಿಗಳು ಸಮುದಾಯಕ್ಕೆ ಒಂದು ಸಣ್ಣ ಕೆಲಸ ಮಾಡಿಕೊಟ್ಟಿಲ್ಲ. ಹೀಗಾಗಿ ಸಮುದಾಯವರು ಒಗ್ಗೂಡಿ ತಮ್ಮ ಬೇಡಿಕೆಗಳನ್ನು ಈಡೇರಿಸಿಕೊಳ್ಳಬೇಕಿದೆ ಎಂದು ವೀರಶೈವ ಮಹಾಸಭಾ ತಾಲೂಕು ಅಧ್ಯಕ್ಷ ನಿರಂಜನ್ ಬಾಬು ಹೇಳಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಗುರುವಾರ ಆಯೋಜಿಸಿದ್ದ ಮೇಲುಕೋಟೆ ವಿಧಾನಸಭಾ ಕ್ಷೇತ್ರದ ವೀರಶೈವ ಲಿಂಗಾಯತ ಸಮುದಾಯದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸಮುದಾಯ ಒಗ್ಗಟ್ಟಾದರೆ ಮಾತ್ರ ಕ್ಷೇತ್ರದಲ್ಲಿ ಸಮುದಾಯದ ಅಭಿವೃದ್ಧಿ ಕಾಣಲು ಸಾಧ್ಯ. ಇಲ್ಲವಾದರೆ ಸಮುದಾಯದ ಬೆಳವಣಿಗೆ ಜತೆಗೆ ಬೇಡಿಕೆಗಳನ್ನು ಈಡೇರಿಸಿಕೊಳ್ಳಲು ಸಾಧ್ಯವಾಗುವುದಿಲ್ಲ. ನಮ್ಮಿಂದ ಮತ ಪಡೆದ ರಾಜಕಾರಣಿಗಳು ನಮ್ಮನ್ನು ಕಡೆಗಣಿಸಿದ್ದಾರೆ. ಚುನಾವಣೆ ಸಂದರ್ಭದಲ್ಲಿ ಮಾತ್ರ ಸಮುದಾಯವನ್ನು ಓಲೈಸಿ ಮತ ಗಿಟ್ಟಿಸಿಕೊಳ್ಳುತ್ತಾರೆ. ಉಳಿದ ಸಮಯದಲ್ಲಿ ನಮ್ಮ ಇರುವಿಕೆ ಅವರ ಅರಿವಿಗೆ ಬರುವುದಿಲ್ಲ ಎಂದರು.
ವೀರಶೈವ ಮುಖಂಡರಾದ ಮಂಡಿಬೆಟ್ಟಹಳ್ಳಿ ಜಗದೀಶ್, ಡಿಂಕಾ ರಾಜಶೇಖರ್, ಕೇಬಲ್ ಮಂಜು, ಮಂಜುನಾಥ್, ಕೆ.ಎಲ್.ಆನಂದ್, ತಾಳಶಾಸನ ವಿಷಕಂಠ, ಬೇಬಿ ಲೋಕೇಶ್ಮೂರ್ತಿ, ಬೇವುಕಲ್ಲು ಗಂಗಣ್ಣ, ಮಾಡ್ಲ ಜಗದೀಶ್, ಸೌದೆಹಳ್ಳಿ ಉಮೇಶ್, ರೇಣುಕಾರಾಧ್ಯ ಇತರರು ಇದ್ದರು.