ಚಿಕ್ಕಬಳ್ಳಾಪುರ : ಹಾಲು ಉತ್ಪಾದನೆಯಲ್ಲಿ ಉತ್ತಮ ಸಾಧನೆ ಜತೆಗೆ ರೈತರ ಹಿತ ಕಾಪಾಡುತ್ತಿರುವ ಒಕ್ಕೂಟದ ನೌಕರರ ಶ್ರಮ ಶ್ಲಾಘನೀಯ ಎಂದು ಕೋಲಾರ ಮತ್ತು ಚಿಕ್ಕಬಳ್ಳಾಪುರ ಹಾಲು ಒಕ್ಕೂಟದ ನಿರ್ದೇಶಕ ಎನ್.ಸಿ.ವೆಂಕಟೇಶ್ ಮೆಚ್ಚುಗೆ ವ್ಯಕ್ತಪಡಿಸಿದರು.
ಹಾಲು ಉತ್ಪಾದಕರ ಸಹಕಾರ ಸಂಘದ ನಿವೃತ್ತ ನೌಕರರನ್ನು ಭಾನುವಾರ ನಗರದ ಕೋಚಿಮುಲ್ ಶಿಬಿರ ಕಚೇರಿಯಲ್ಲಿ ಸನ್ಮಾನಿಸಿ ಮಾತನಾಡಿದರು.ಮಳೆ ಅಭಾವ, ಅಂತರ್ಜಲಮಟ್ಟ ಕುಸಿತ, ನೀರಿನ ಹಾಹಾಕಾರದಿಂದ ಕೃಷಿ ಚಟುವಟಿಕೆ ಕೈಗೊಳ್ಳಲು ತೊಂದರೆಯಾಗಿರುವ ಬಯಲುಸೀಮೆ ಜಿಲ್ಲೆಯಲ್ಲಿ ಹೈನುಗಾರಿಕೆಯೇ ಲಾಭದಾಯಕವಾಗಿದೆ. ರೈತರು ಒಕ್ಕೂಟಕ್ಕೆ ಪ್ರತಿದಿನ ಹಾಲು ಪೂರೈಸುವ ಮೂಲಕ ಆರ್ಥಿಕಾಭಿವೃದ್ಧಿಯನ್ನು ಸಾಧಿಸುತ್ತಿದ್ದಾರೆ ಎಂದು ತಿಳಿಸಿದರು.
ಒಕ್ಕೂಟದ ಮುಖ್ಯ ಗುರಿ ಕೇವಲ ಲಾಭ ಗಳಿಕೆಯಲ್ಲ. ರೈತರು ಮತ್ತು ನೌಕರರಿಗೆ ಕಾಲ ಕಾಲಕ್ಕೆ ಅಗತ್ಯ ಸವಲತ್ತುಗಳನ್ನು ಒದಗಿಸುವ ಮೂಲಕ ಎಲ್ಲರ ಹಿತ ಕಾಪಾಡುವುದು. ಈ ನಿಟ್ಟಿನಲ್ಲಿ ಪರಸ್ಪರ ಉತ್ತಮ ಸ್ಪಂದನೆಯಿಂದ ಒಳ್ಳೆಯ ಹೆಸರು ಗಳಿಸಲು ಸಾಧ್ಯವಾಗಿದೆ ಎಂದರು.
ನಿವೃತ್ತಿ ಹೊಂದಿದ್ದ ಕಾರ್ಯದರ್ಶಿಗಳಿಗೆ ನಿವೃತ್ತಿ ಭತ್ಯೆ 2 ಲಕ್ಷ ರೂ. ಮತ್ತು ಪರೀಕ್ಷಕರಿಗೆ 1 ಲಕ್ಷ ರೂ, ಸಹಾಯಕರಿಗೆ 75 ಸಾವಿರ ರೂ. ನೆರವು ನೀಡಲಾಗುತ್ತಿದೆ ಎಂದು ತಿಳಿಸಿದರು.ಕೋಚಿಮುಲ್ ಶಿಬಿರ ಕಚೇರಿ ವ್ಯವಸ್ಥಾಪಕರಾದ ಪಾಪೇಗೌಡ, ರಮೇಶ್ ಬಾಬು, ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಬಿ.ಎನ್.ಮುನಿಕೃಷ್ಣಪ್ಪ ಇತರರಿದ್ದರು.
ನಿವೃತ್ತರಿಗೆ ಸನ್ಮಾನ : ಸಂಘದ ಕಾರ್ಯದರ್ಶಿಗಳಾದ ಎಂ.ರಾಮಕೃಷ್ಣಾರೆಡ್ಡಿ, ಡಿ.ಶಾಮಣ್ಣ, ಆರ್.ವಿ.ರಾಮಾಂಜಿನಪ್ಪ, ಆರ್.ಕೃಷ್ಣಪ್ಪ, ಬಿ.ವಿ.ಚಿಕ್ಕಹನುಮಂತಪ್ಪ, ಬಿ.ರಾಮಕೃಷ್ಣಪ್ಪ, ಬಿ.ಬಸವರಾಜಯ್ಯ, ಹಾಲು ಪರೀಕ್ಷಕ ಜೆ.ಮುನಿಯಪ್ಪರವರನ್ನು ಸನ್ಮಾನಿಸಲಾಯಿತು. ಹಾಗೆಯೇ ಗಿಡ ವಿತರಿಸಿ ಗೌರವಿಸಲಾಯಿತು.