ತೀರ್ಥಹಳ್ಳಿ: ತಾಲೂಕಿನ ನೆರಟೂರು ಗ್ರಾಪಂ ವ್ಯಾಪ್ತಿಯಲ್ಲಿ ಗ್ರಾಮಸ್ಥರಿಗೂ ಮಾಹಿತಿ ನೀಡದೆ ಮಾಡಿದ್ದ ಜಿಗಳಗೋಡು-ಕಡೇಮನೆ ಸಂಪರ್ಕದ 50 ಲಕ್ಷ ರೂ. ವೆಚ್ಚದ ರಸ್ತೆ ಡಾಂಬರೀಕರಣ ವಾರದಲ್ಲೇ ಕಿತ್ತು ಹೋಗಿದೆ. ಕಳಪೆ ಕಾಮಗಾರಿ ಕುರಿತು ಗುತ್ತಿಗೆದಾರರ ವಿರುದ್ಧ ಇಲ್ಲಿನ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿ ಡಾಂಬರನ್ನು ಕೀಳುವ ಮೂಲಕ ಪ್ರತಿಭಟಿಸಿದ್ದಾರೆ. ಗ್ರಾಮಸ್ಥರಿಗೆ ಹೇಳದೆ ಕೇಳದೆ ಕಾಮಗಾರಿಯನ್ನು ಮಾಡಲಾಗಿದೆ. ಅಲ್ಲದೆ ರಸ್ತೆಯ ಅಂಚಿಗೆ ಸರಿಯಾಗಿ ಮಣ್ಣು ಹಾಕದ ಕಾರಣ ಮಳೆಗಾಲದಲ್ಲಿ ರಸ್ತೆಯ ಡಾಂಬರು ಚರಂಡಿ ಸೇರುತ್ತದೆ. ಮೇಲ್ನೋಟಕ್ಕೆ ಕಾಣುವ ಡಾಂಬರು ರಸ್ತೆಗೆ ಅತ್ಯಂತ ಕಳಪೆ ಮಟ್ಟದ ಟಾರು ಬಳಸಲಾಗಿದೆ. ಹಾಗಾಗಿ ವಾರದಲ್ಲೇ ಕಿತ್ತು ಹೋಗಿದೆ. ಕೂಡಲೇ ಸಂಬಂಧಿಸಿದ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ತನಿಖೆ ನಡೆಸಿ ಕಾಮಗಾರಿಯನ್ನು ಸರಿಪಡಿಸಬೇಕು. ಸಂಬಂಧಿಸಿದ ಗುತ್ತಿಗೆದಾರರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.