ಹಾವೇರಿ: ಜಮೀನು ಮಾರಾಟಕ್ಕೆ ಸಂಬಂಧಿಸಿದಂತೆ ಎನ್ಒಸಿ ನೀಡಲು 5 ಸಾವಿರ ರೂ.ಗಳ ಲಂಚಕ್ಕೆ ಬೇಡಿಕೆಯಿಟ್ಟಿದ್ದ ಹಾವೇರಿ ತಹಸೀಲ್ದಾರ್ ಕಚೇರಿಯ ಎಸ್ಡಿಎ ಗುರುವಾರ ಎಸಿಬಿ ಬಲೆಗೆ ಬಿದ್ದಿದ್ದಾನೆ.
ತಹಸೀಲ್ದಾರ್ ಕಚೇರಿಯಲ್ಲಿ ಎಸ್ಡಿಎ ಆಗಿದ್ದ ಟಿ. ಪರಶುರಾಮ ಎಂಬುವರೇ ಎಸಿಬಿ ಬಲೆಗೆ ಬಿದ್ದ ನೌಕರ. ತಾಲೂಕಿನ ಹಂದಿಗನೂರ ಗ್ರಾಮದ ರೈತ ಕಲವೀರಗೌಡ ಕರಬಸನಗೌಡ ಪಾಟೀಲ ಎಂಬುವರಿಂದ 3 ಸಾವಿರ ರೂ.ಗಳ ಲಂಚ ಸ್ವೀಕರಿಸುತ್ತಿದ್ದ ಸಮಯದಲ್ಲಿ ಎಸಿಬಿಯವರು ದಾಳಿ ಮಾಡಿ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.
ರೈತ ಕಲವೀರಗೌಡ ಅವರ ಸರ್ವೆ ನಂಬರ್ 28/1ಎ ಜಮೀನು 2.16 ಎಕರೆಯನ್ನು ಬೇರೆಯವರಿಗೆ ಮಾರಾಟ ಮಾಡಲು ತಹಸೀಲ್ದಾರ್ ಕಚೇರಿಯಿಂದ ಎನ್ಒಸಿಗೆ ಅರ್ಜಿ ಸಲ್ಲಿಸಿದ್ದರು. ಅದನ್ನು ಕೊಡಲು ಪರಶುರಾಮ 5 ಸಾವಿರ ರೂ. ಲಂಚಕ್ಕೆ ಬೇಡಿಕೆಯಿಟ್ಟಿದ್ದ. ಇದರಿಂದ ನೊಂದ ರೈತ ಎಸಿಬಿಯವರಿಗೆ ದೂರು ನೀಡಿದ್ದ. ಎಸಿಬಿ ಡಿವೈಎಸ್ಪಿ ಸೋಮಲಿಂಗಪ್ಪ ಕುಂಬಾರ ನೇತೃತ್ವದಲ್ಲಿ ನಡೆದ ದಾಳಿಯಲ್ಲಿ ಸಿಪಿಐಗಳಾದ ಸುದರ್ಶನ, ಶ್ರೀಶೈಲ ಚೌಗಲೆ ಹಾಗೂ ಸಿಬ್ಬಂದಿ ಪಾಲ್ಗೊಂಡಿದ್ದರು.