ಶಿಗ್ಗಾಂವಿ: ಲಾಕ್ಡೌನ್ ನಿಷೇಧಾಜ್ಞೆ ಉಲ್ಲಂಘಿಸಿ ಮದ್ಯ ಮಾರಾಟ ಮಾಡಿದ ಆರೋಪದ ಮೇಲೆ ಪಟ್ಟಣದ ಎರಡು ವೈನ್ಶಾಪ್ಗಳ ವಿರುದ್ಧ ಪ್ರಕರಣ ದಾಖಲಾದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಪಟ್ಟಣದ ಹೊಸ ಬಸ್ ನಿಲ್ದಾಣದ ಬಳಿ ಇರುವ ರತ್ನಾ ವೈನ್ಶಾಪ್ ಹಾಗೂ ಹಳೇ ಬಸ್ ನಿಲ್ದಾಣ ಬಳಿಯ ವಿನಾಯಕ ವೈನ್ಶಾಪ್ನ ಬಾಗಿಲು ತೆರದು ದಾಸ್ತಾನನ್ನು ಅಬಕಾರಿ ಅಧಿಕಾರಿಗಳು ಪರಿಶೀಲಿಸಿದ್ದರು. ಈ ವೇಳೆ ಒಂದೇ ದಿನದಲ್ಲಿ ಭಾರಿ ಪ್ರಮಾಣದ ಮದ್ಯ ಮಾರಾಟವಾಗಿರುವುದು ಕಂಡುಬಂದಿತ್ತು.
ಮಾ. 22ರ ಜನತಾ ಕರ್ಪ್ಯೂ ನಂತರ ಕೇವಲ ಒಂದು ದಿನ ಮದ್ಯ ವ್ಯಾಪಾರ ನಡೆದಿದೆ. ಸನ್ನದುದಾರರು ಅನಧಿಕೃತವಾಗಿ ಮಾರಾಟ ಮಾಡಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ. ವಿನಾಯಕ ವೈನ್ ಶಾಪ್ ಸಿಎಲ್ 2 ಸನ್ನದುದಾರ ಎಸ್.ಜಿ. ಬಡಿಗೇರ ಹಾಗೂ ರತ್ನಾ ವೈನ್ಶಾಪ್ ಸಿಎಲ್ 2 ಸನ್ನದುದಾರ ಶಿವಾನಂದ ಮಹಲಿಂಗಪ್ಪ ಬಿಜಾಪುರ ಹಾಗೂ ಭಾಗ್ಯಶ್ರೀ ಶಿವಾನಂದ ಬಿಜಾಪುರ ವಿರುದ್ಧ ಏ. 26ರಂದು ಪ್ರತ್ಯೇಕ ದೂರು ದಾಖಲಾಗಿದೆ ಎಂದು ಅಬಕಾರಿ ಇಲಾಖೆ ಸಿಪಿಐ ಆರ್.ಐ. ಹೂಗಾರ, ಅಬಕಾರಿ ಸಬ್ ಇನ್ಸ್ಪೆಕ್ಟರ್ ಜಿ.ಬಿ. ಗುಡಿಮನಿ ತಿಳಿಸಿದ್ದಾರೆ.