ಹುಬ್ಬಳ್ಳಿ: ಇಲ್ಲಿಯ ಅಮರಗೋಳ ಶ್ರೀ ಜಗಜ್ಯೋತಿ ಬಸವೇಶ್ವರ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಆಹಾರ ಧಾನ್ಯ ವರ್ತಕರ ಸಂಘದಿಂದ ಪ್ರಧಾನಮಂತ್ರಿ ಹಾಗೂ ಮುಖ್ಯಮಂತ್ರಿ ಕರೊನಾ ನಿಧಿಗೆ 6.50 ಲಕ್ಷ ರೂ. ದೇಣಿಗೆ ನೀಡಲಾಯಿತು.
ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್ ಮೂಲಕ ಕರೊನಾ ನಿಧಿಗೆ ಅರ್ಪಿಸಲಾಯಿತು.
‘ಕರೊನಾ ತಡೆಗೆ ಸ್ವಯಂ ನಿಯಂತ್ರಣ, ತಾಳ್ಮೆ, ಸಂಯಮ ಮುಖ್ಯ. ಹುಬ್ಬಳ್ಳಿ ಎಪಿಎಂಸಿ ಉತ್ತರ ಕರ್ನಾಟಕ, ಗೋವಾ ರಾಜ್ಯಕ್ಕೆ ಆಹಾರ ಸಾಮಗ್ರಿ ಪೂರೈಸುವ ಪ್ರಮುಖ ಕೇಂದ್ರ. ಇಲ್ಲಿನ ವರ್ತಕರು ಜವಾಬ್ದಾರಿಯಿಂದ ವರ್ತಿಸಬೇಕು. ರೈತರ ತರಕಾರಿ, ಇತರ ಉತ್ಪನ್ನಗಳನ್ನು ಕಡಿಮೆ ಬೆಲೆಗೆ ಖರೀದಿಸಿ ಹೆಚ್ಚು ಬೆಲೆಗೆ ಮಾರಾಟ ಮಾಡá-ವ ಮೂಲಕ ಶೋಷಣೆ ಮಾಡಬಾರದು. ಎಲ್ಲರೂ ಬದುಕಬೇಕು. ಈ ವಿಷಯದಲ್ಲಿ ಎಪಿಎಂಸಿ ಜವಾಬ್ದಾರಿ ದೊಡ್ಡದಿದೆ’ ಎಂದು ಸಚಿವ ಜಗದೀಶ ಶೆಟ್ಟರ್ ಹೇಳಿದರು.
ಕೆಎಲ್ಇ ನಿರ್ದೇಶಕ ಶಂಕ್ರಣ್ಣ ಮುನವಳ್ಳಿ ಮಾತನಾಡಿ, ಕರೊನಾ ಹಿಮ್ಮೆಟ್ಟಿಸಲು ನಾವೆಲ್ಲರೂ ಸ್ವಯಂ ಸೈನಿಕರಂತೆ ಕೆಲಸ ಮಾಡಬೇಕು. ವ್ಯಾಪಾರಸ್ಥರು ಇದನ್ನು ಅರಿತುಕೊಳ್ಳಬೇಕು. ಗ್ರಾಹಕರಿಗೂ ತಿಳಿವಳಿಕೆ ನೀಡಬೇಕು ಎಂದರು.
ಶಾಸಕರಾದ ಅರವಿಂದ ಬೆಲ್ಲದ, ಪ್ರದೀಪ ಶೆಟ್ಟರ್, ಎಸ್.ವಿ. ಸಂಕನೂರ, ಎಪಿಎಂಸಿ ಅಧ್ಯಕ್ಷ ರಾಮಚಂದ್ರ ಜಾಧವ, ಸದಸ್ಯರಾದ ಚನ್ನು ಹೊಸಮನಿ, ಈಶ್ವರ ಕಿತ್ತೂರ, ಆಹಾರ ಧಾನ್ಯ ವರ್ತಕರ ಸಂಘದ ಅಧ್ಯಕ್ಷ ಶಿವಾನಂದ ಸಣ್ಣಕ್ಕಿ, ಉಪಾಧ್ಯಕ್ಷ ಗಣೇಶ ಕಠಾರೆ, ಕಾರ್ಯದರ್ಶಿ ಮಲ್ಲಿಕಾರ್ಜುನ ಬೋರಟ್ಟಿ, ಸಹಕಾರ್ಯದರ್ಶಿ ಕಿಶೋರಕುಮಾರ ಪಟೇಲ್, ಖಜಾಂಚಿ ಶ್ರೀಕಾಂತ ಮಹಾಲೆ, ಕಾರ್ಯಕಾರಿ ಮಂಡಳಿಯ ಮಂಜುನಾಥ ಮುನವಳ್ಳಿ, ಗೌತಮ ಬಾಫಣಾ, ಗುರು ಇಂಗಳಗಿ, ಈರಣ್ಣ ಕೆಸರಪ್ಪನವರ, ಉಮೇಶ ತೊಗ್ಗಿ, ಅಧಿಕಾರಿಗಳು, ಇತರರಿದ್ದರು.