ತೇರದಾಳ: ಇಲ್ಲಿನ ನೀಲಕಂಠೇಶ್ವರ ದೇವಸ್ಥಾನ ಎದುರಿನ ಕೃಷಿ ಉತ್ಪನ್ನ ಉಪ ಮಾರುಕಟ್ಟೆಗೆ ಕಟ್ಟಿದ್ದ ಕಾಂಪೌಂಡ್ ಗೋಡೆಯನ್ನು ಸೋಮವಾರ ಮತ್ತೆ ಅಲ್ಲಿನ ಮಹಿಳೆಯರು ಹಾಗೂ ಜನರು ಕೆಡಿವಿದ್ದಾರೆ.
ಮಾರುಕಟ್ಟೆ ಆವರಣದಲ್ಲಿ ಬೇಕಾಬಿಟ್ಟಿಯಾಗಿ ಮದ್ಯಪಾನ ಮಾಡುವುದು, ಕುಡಿದ ಅಮಲಿನಲ್ಲಿ ಬಾಟಲಿ ಒಡೆಯುವುದು, ಜೂಜು ಆಡುವುದು ಸೇರಿ ಅಕ್ರಮ ಚಟುವಟಿಕೆಗಳನ್ನು ನಿರಂತರವಾಗಿ ನಡೆಯುತ್ತಿವೆ. ಜತೆಗೆ ವ್ಯಾಪಾರಸ್ಥರು ತಮ್ಮ ವಾಹನಗಳನ್ನು ಗೋದಾಮು ಮುಂಭಾಗ ನಿಲ್ಲಿಸಿದ ಸಂದರ್ಭದಲ್ಲಿ ವಾಹನಗಳಿಗೂ ಕಿರಿಕ್ ಮಾಡುವ ಘಟನೆಗಳು ನಡೆಯುತ್ತಿವೆ. ಇದರಿಂದ ಬೇಸತ್ತ ವ್ಯಾಪಾರಸ್ಥರು ಅಧಿಕಾರಿಗಳಿಗೆ ಸೂಕ್ತ ಕ್ರಮ ಕೈಗೊಳ್ಳಲು ಒತ್ತಾಯಿಸಿದ್ದರು. ಆವರಣದಲ್ಲಿನ ಒಡೆದಿರುವ ಕಾಂಪೌಂಡ್ ಗೋಡೆಯನ್ನು ಕಟ್ಟಲು ಕ್ರಮ ಕೈಗೊಳ್ಳಲಾಗಿತ್ತು. ಸೋಮವಾರ ದಿಢೀರನೆ ಹಲವಾರು ಮಹಿಳೆಯರು ಸ್ಥಳಕ್ಕೆ ಆಗಮಿಸಿ ಕಟ್ಟಡ ಕಾರ್ಮಿಕರಿಗೆ ಆವಾಜ್ ಹಾಕಿ ಕಟ್ಟಿದ ಕಾಂಪೌಂಡ್ ಗೋಡೆಯನ್ನು ಕೆಡವಿ ಉದ್ಧಟತನ ಮೆರೆದಿದ್ದಾರೆ.
ದಾರಿ ಬಿಡಲು ಒಪ್ಪಿದ್ದರು
ಒಡೆದಿರುವ ಕಾಂಪೌಂಡ್ನಿಂದ ಮಾರುಕಟ್ಟೆ ಆವರಣ ಮೂಲಕ ಸಾರ್ವಜನಿಕರು, ಶಾಲೆ-ಕಾಲೇಜು ವಿದ್ಯಾರ್ಥಿಗಳು ಸಂಚರಿಸುತ್ತಾರೆ. ಕಾಂಪೌಂಡ್ ಗೋಡೆ ಕಟ್ಟಿದರೆ ನಮಗೆ ದಾರಿ ಇಲ್ಲದಂತಾಗುತ್ತದೆ ಎಂದು ನಿವಾಸಿಗಳು ಹೇಳಿದ ಕಾರಣ ಪುರಸಭೆ ಸದಸ್ಯರು ಹಾಗೂ ಎಪಿಎಂಸಿ ಅಧ್ಯಕ್ಷರು, ಅಧಿಕಾರಿಗಳು ಸಭೆ ನಡೆಸಿ ಕಾಂಪೌಂಡ್ ಗೋಡೆ ಕಟ್ಟಿ ಪಾದಚಾರಿಗಳು ಅಲೆದಾಡುವಂತೆ ಗೇಟ್ ಅಳವಡಿಸುವುದಾಗಿ ತಿಳಿಸಿದ್ದರು. ಗೇಟ್ ಅಳವಡಿಸಲು ಒಪ್ಪಿದರೂ ಮತ್ತೆ ಕಾಂಪೌಂಡ್ ಗೋಡೆ ಕೆಡವಿರುವುದು ಎಷ್ಟು ಸರಿ ಎಂದು ಅಧಿಕಾರಿಗಳ ಪ್ರಶ್ನೆಯಾಗಿದೆ.
ಜನಪ್ರತಿನಿಧಿಗಳ ಕುಮ್ಮಕ್ಕು
ಕಾಂಪೌಂಡ್ ಗೋಡೆ ಕೆಡವಲು ಜನಪ್ರತಿನಿಧಿಗಳ ಕುಮ್ಮಕ್ಕು ಇದೆ ಎಂದು ವ್ಯಾಪಾರಸ್ಥರು, ಅಧಿಕಾರಿಗಳು ಆರೋಪಿಸಿದ್ದಾರೆ. ಎಪಿಎಂಸಿ ಅಧ್ಯಕ್ಷ ಸಂಜಯ ಸಿದ್ದಾಪುರ ಮಾತನಾಡಿ, ಸರ್ಕಾರಿ ಆಸ್ತಿಯನ್ನು ಜನಪ್ರತಿನಿಧಿಗಳೇ ಮುಂದು ನಿಂತು ಹಾಳು ಮಾಡುತ್ತಾರೆ ಎಂದರೆ ಹೇಗೆ. ಅಷ್ಟಕ್ಕೂ ಎಪಿಎಂಸಿ ಆವರಣದಲ್ಲಿ ಸಾರ್ವಜನಿಕರು ಅಲೆದಾಡಲು ಮಾನವೀಯತೆಯಿಂದ ಅವಕಾಶ ನೀಡಲಾಗಿದೆ. ಆದರೆ ಇದನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವುದು ನಿಜಕ್ಕೂ ನಾಚಿಗೇಡಿನ ಸಂಗತಿ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.