ನಾಗಮಂಗಲ: ಬಿಜೆಪಿಗೆ ರಾಜ್ಯ ಕಾಪಾಡುವ ಯೋಗ್ಯತೆಯಿಲ್ಲ. ರಾಜ್ಯದ ನಾಡು, ನುಡಿ ರಕ್ಷಣೆ ಕುಮಾರಣ್ಣನಿಂದ ಮಾತ್ರ ಸಾಧ್ಯ ಎಂದು ಶಾಸಕ ಸುರೇಶ್ ಗೌಡ ಹೇಳಿದರು.
ನಾಗಮಂಗಲ ಪಟ್ಟಣದಲ್ಲಿ ಸೋಮವಾರ ರಾತ್ರಿ ಹಮ್ಮಿಕೊಂಡಿದ್ದ ಪಂಚರತ್ನ ರಥಯಾತ್ರೆಯ ಬಹಿರಂಗ ಸಬೆಯಲ್ಲಿ ಅವರು ಮಾತನಾಡಿ, ಮಿನಿ ವಿಧಾನಸೌಧದ ಆವರಣದಲ್ಲಿ ಅಂಬೇಡ್ಕರ್ ಪ್ರತಿಮೆ ನಿಲ್ಲಿಸಲು ಬಿಟ್ಟಿರಲಿಲ್ಲ. ಜನರು ಕೊಟ್ಟ ಅಧಿಕಾರವನ್ನು ಚಲುವರಾಯಸ್ವಾಮಿ ಮಾರಿಕೊಂಡರು. ಆದರೆ, ಈಗ ಸುಳ್ಳು ಹೇಳಿಕೊಂಡು ಊರೂರು ಸುತ್ತುತ್ತಿದ್ದಾರೆ. ಗಡಿ ಸಮಸ್ಯೆಗೆ ಶಾಶ್ವತ ಪರಿಹಾರ ಸಿಗಬೇಕೆಂದರೆ ಕುಮಾರಸ್ವಾಮಿ ಸಿಎಂ ಆಗಬೇಕಿದೆ ಎಂದರು.
ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಮಾತನಾಡಿ, ಹೊಸ ಪಿಂಚಣಿ ಪದ್ಧತಿಯನ್ನು ರದ್ದುಗೊಳಿಸಲು ಪ್ರತಿಭಟನೆ ನಡೆಸುತ್ತಿರುವ ಜಾಗಕ್ಕೆ ಕಾಂಗ್ರೆಸ್ನವರು ಹೋಗಿ ತಮ್ಮ ಸರ್ಕಾರ ಬಂದ ನಂತರ ರದ್ದುಗೊಳಿಸುವುದಾಗಿ ಹೇಳುತ್ತಿದ್ದಾರೆ. ಆದರೆ, 5 ವರ್ಷ ಅಧಿಕಾರದಲ್ಲಿದ್ದಾಗ ರದ್ದುಗೊಳಿಸಲು ಆಗಲ್ಲ ಎಂದು ಹೇಳಿದ್ದರು. ಈಗ ಓಟ್ ಗಿಮಿಕ್ಗಾಗಿ ಅವರಿಗೆ ಬೆಂಬಲ ಸೂಚಿಸುತ್ತಿದ್ದಾರೆ ಎಂದು ಆರೋಪಿಸಿದರು.
ಎಚ್ಡಿಕೆಗೆ 2 ಕುರಿಮರಿ ಕೊಡುಗೆ: ತಾಲೂಕು ಕುರುಬರ ಸಂಘದ ವತಿಯಿಂದ ಎಚ್.ಡಿ.ಕುಮಾರಸ್ವಾಮಿ ಅವರಿಗೆ 2 ಕುರಿಮರಿಗಳನ್ನು ಕೊಡುಗೆಯಾಗಿ ನೀಡುವ ಜತೆಗೆ ಕುರಿ ಕಂಬಳಿ ಹೊದಿಸಿ ಗೌರವಿಸಿದರು. ಎರಡು ಕುರಿಮರಿಗಳನ್ನು ತಮ್ಮ ತೋಟದಲ್ಲಿ ಬೆಳೆಸುವುದಾಗಿ ಎಚ್ಡಿಕೆ ತಿಳಿಸಿದರು.
ರಾತ್ರಿಯಾದರೂ ನೆರೆದಿದ್ದ ಕಾರ್ಯಕರ್ತರು: ಮಾಜಿ ಸಿಎಂ ಕುಮಾರಸ್ವಾಮಿ ಪಟ್ಟಣದ ಟಿಬಿ ಬಡಾವಣೆಯ ಬಹಿರಂಗ ಸಮಾವೇಶದ ವೇದಿಕೆಗೆ ಬರುವಷ್ಟರಲ್ಲಿ ರಾತ್ರಿ 9 ಗಂಟೆಯಾದರೂ ಸಾವಿರಾರು ಸಂಖ್ಯೆಯಲ್ಲಿ ಕಾರ್ಯಕರ್ತರು ಕಿಕ್ಕಿರಿದು ನೆರೆದಿದ್ದರು. ಮೊಬೈಲ್ ಟಾರ್ಚ್ ಹಾಕಿಕೊಂಡು ಕುಮಾರಸ್ವಾಮಿ ಹಾಗೂ ಎಚ್.ಡಿ. ದೇವೇಗೌಡರಿಗೆ ಜೈಕಾರ ಕೂಗಿ ಹರ್ಷ ವ್ಯಕ್ತಪಡಿಸಿದರು.