ಹುಬ್ಬಳ್ಳಿ: ಧಾರವಾಡ ಜಿಲ್ಲಾದ್ಯಂತ ಒಟ್ಟು 190 ವೆಂಟಿಲೇಟರ್ಗಳಿದ್ದು, ಈ ಪೈಕಿ 7ಕ್ಕೆ ಜೀವವಿಲ್ಲ! 8 ಸರ್ಕಾರಿ ಆಸ್ಪತ್ರೆಗಳಲ್ಲಿ 145 ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ 45 ವೆಂಟಿಲೇಟರ್ಗಳಿವೆ. ಹುಬ್ಬಳ್ಳಿಯ ಕಿಮ್ಸ್ನಲ್ಲಿ 110, ಧಾರವಾಡದ ಜಿಲ್ಲಾಸ್ಪತ್ರೆಯಲ್ಲಿ 22, ಹುಬ್ಬಳ್ಳಿಯ ರೈಲ್ವೆ ಆಸ್ಪತ್ರೆಯಲ್ಲಿ 6, ಕಲಘಟಗಿ ತಾಲೂಕು ಆಸ್ಪತ್ರೆಯಲ್ಲಿ 3 ಹಾಗೂ ನವಲಗುಂದ ತಾಲೂಕು ಆಸ್ಪತ್ರೆಯಲ್ಲಿ 4 ವೆಂಟಿಲೇಟರ್ಗಳಿವೆ.
ಕಲಘಟಗಿ ಹಾಗೂ ನವಲಗುಂದ ಆಸ್ಪತ್ರೆಯ ವೆಂಟಿಲೇಟರ್ಗಳನ್ನು ಸಮರ್ಪಕವಾಗಿ ಬಳಸಿಕೊಳ್ಳುತ್ತಿಲ್ಲ ಎಂದು ತಿಳಿದು ಬಂದಿದೆ. ಏಕೆಂದರೆ, ಇವುಗಳ ಕಾರ್ಯ ನಿರ್ವಹಣೆಗೆ ಅರಿವಳಿಕೆ ತಜ್ಞ ವೈದ್ಯರ ಅಗತ್ಯತೆ ಗ್ರಾಮೀಣ ಭಾಗದಲ್ಲಿದೆ. ಆದರೆ, ಈ ಎರಡೂ ತಾಲೂಕು ಆಸ್ಪತ್ರೆಗಳಲ್ಲಿ ಇಂಥ ತಜ್ಞ ವೈದ್ಯರು ಲಭ್ಯವಿಲ್ಲ.
‘ಎರಡೂವರೆ ಲಕ್ಷ ರೂಪಾಯಿ ಸಂಬಳ ನೀಡುತ್ತೇವೆಂದರೂ ಅರಿವಳಿಕೆ ತಜ್ಞ ವೈದ್ಯರು ಲಭಿಸುತ್ತಿಲ್ಲ’ ಎಂದು ಆಸ್ಪತ್ರೆಯ ಹಿರಿಯ ಅಧಿಕಾರಿಗಳು ಸಮಸ್ಯೆಯನ್ನು ಬಿಚ್ಚಿಟ್ಟಿದ್ದಾರೆ.
ವೆಂಟಿಲೇಟರ್ಗಳನ್ನು ಮೊದಲು ಅಷ್ಟೊಂದು ಬಳಕೆ ಮಾಡುತ್ತಿರಲಿಲ್ಲ. ಈಗ ಕರೊನಾ ಸೋಂಕುಳ್ಳವರಿಗೆ ಉಸಿರಾಟದ ಸಮಸ್ಯೆ ತೀವ್ರವಾಗಿ ಕಾಡುತ್ತಿದೆ. ಹಾಗಾಗಿ ವೆಂಟಿಲೇಟರ್ಗಳ ಅಗತ್ಯ ಹೆಚ್ಚಾಗಿ ಕಂಡು ಬರುತ್ತಿದೆ. ಹೀಗಾಗಿ, ಈ ಎರಡೂ ಆಸ್ಪತ್ರೆಗಳಲ್ಲಿರುವ ಏಳೂ ವೆಂಟಿಲೇಟರ್ಗಳನ್ನು ತಜ್ಞ ಸಿಬ್ಬಂದಿ ಇರುವ ಬೇರೆ ಆಸ್ಪತ್ರೆಗಳಿಗೆ ಸ್ಥಳಾಂತರಿಸಿದ್ದರೆ ಸಾಕಷ್ಟು ಜನರ ಸಾವನ್ನು ತಡೆಯಬಹುದಿತ್ತಲ್ಲ ಎಂಬ ಪ್ರಶ್ನೆ ಕೇಳಿ ಬರುತ್ತಿದೆ. ಈಗಲಾದರೂ ಸಂಬಂಧಪಟ್ಟ ಅಧಿಕಾರಿಗಳು ಈ ನಿಟ್ಟಿನಲ್ಲಿ ಕ್ರಮಕೈಗೊಳ್ಳುವಂತಾಗಲಿ ಎಂಬುದು ಪ್ರಜ್ಞಾವಂತ ನಾಗರಿಕರ ನಿರೀಕ್ಷೆಯಾಗಿದೆ.
ಗುಣಮಟ್ಟದಿಂದ ಕೂಡಿಲ್ಲವೆಂಬುದು ನಿಜವಲ್ಲ
ಪಿಎಂ ಕೇರ್ಸ್ ನಿಧಿಯಲ್ಲಿ ಕಿಮ್ಸ್ಗೆ ವೆಂಟಿಲೇಟರ್ಗಳನ್ನು ನೀಡಲಾಗಿದೆ. ಇವು ಗುಣಮಟ್ಟದಿಂದ ಕೂಡಿಲ್ಲ ಎಂದು ಅಪಪ್ರಚಾರ ಮಾಡುತ್ತಿರುವುದಕ್ಕೆ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರು ಆಕ್ಷೇಪ ವ್ಯಕ್ತಪಡಿಸಿದ್ದರು. ಆದರೂ ಕಿಮ್್ಸ ನಲ್ಲಿ ಸರಿಯಾಗಿ ವೆಂಟಿಲೇಟರ್ ಬಳಕೆ ಸರಿಯಾಗಿ ಆಗುತ್ತಿಲ್ಲ ಎಂಬ ಆರೋಪ ಮೊದಲಿನಿಂದಲೂ ಇದೆ. ಅಗತ್ಯ ಸಿಬ್ಬಂದಿ, ಬೆಡ್ಗಳ ಅಗತ್ಯವೂ ಇದೆ. ‘ಹಲ್ಲಿದ್ದರೆ ಕಡ್ಲೆ ಇಲ್ಲ, ಕಡ್ಲೆ ಇದ್ರೆ ಹಲ್ಲಿಲ್ಲ’ ಎನ್ನುವ ಪರಿಸ್ಥಿತಿ ಕಿಮ್ಸ್ನಲ್ಲಿದೆ. ಇದನ್ನು ಎಲ್ಲರೂ ಮನಗಾಣಬೇಕು ಎನ್ನುತ್ತಾರೆ ವೈದ್ಯಕೀಯ ಸಿಬ್ಬಂದಿ.