ಗಜೇಂದ್ರಗಡ: ಮಾರುಕಟ್ಟೆಯಲ್ಲಿ ಉಳ್ಳಾಗಡ್ಡಿಗೆ ಬೇಡಿಕೆ ಹೆಚ್ಚಿದೆ. ಹಸಿಯೇ ಇರಲಿ, ಗಾತ್ರದಲ್ಲಿ ಚಿಕ್ಕದಾಗಿದ್ದರೂ ಬೇಕೆನ್ನುವ ಗ್ರಾಹಕರಿಗೆ ಬೆಲೆ ಏರಿಕೆಯ ಬಿಸಿ ತಟ್ಟಿದರೆ, ರೈತರಿಗೆ ನಷ್ಟದ ಭೀತಿ ಎದುರಾಗಿದೆ.
ಸತತ ಮಳೆಯಿಂದ ಭೂಮಿಯಲ್ಲಿ ತೇವಾಂಶ ಹೆಚ್ಚಾಗಿ ಬಹುತೇಕ ಉಳ್ಳಾಗಡ್ಡಿ ಬೆಳೆ ಕೊಳೆತಿದೆ. ಬೆಳೆ ಕೊರತೆಯಿಂದ ಮಾರುಕಟ್ಟೆಯಲ್ಲಿ ಬೇಡಿಕೆ ಹೆಚ್ಚಾಗಿದೆ.
ಹಸಿ, ಚಿಕ್ಕ ಗಾತ್ರದ ಉಳ್ಳಾಗಡ್ಡಿ ಕೆಜಿಗೆ 50-60 ರೂ. ವರೆಗೆ ಮಾರಾಟವಾಗುತ್ತಿದೆ. ದೊಡ್ಡ ಗ್ರಾತ್ರದ ಗಡ್ಡೆ 70-80 ರೂ. ವರೆಗೆ ಮಾರಾಟವಾಗುತ್ತಿದೆ. ಆದರೆ, ಒಣಗಿದ ಉಳ್ಳಾಗಡ್ಡಿ ಸಿಗದಂತಾಗಿದೆ. ಇದರಿಂದಾಗಿ ಮಾರುಕಟ್ಟೆಯಲ್ಲಿ ಖರೀದಿಸಿದ ಉಳ್ಳಾಗಡ್ಡಿ ಒಂದೆರಡು ದಿನಕ್ಕೆ ಕೊಳೆತು ಹೋಗುತ್ತಿದೆ. ಗ್ರಾಹಕರು ಗುಣಮಟ್ಟದ ಉಳ್ಳಾಗಡ್ಡಿ ಆಯ್ದು ಖರೀದಿಸುವುದರಿಂದ ವ್ಯಾಪಾರಸ್ಥರಿಗೂ ಭಾರೀನಷ್ಟ ಉಂಟಾಗುತ್ತಿದೆ ಎನ್ನುತ್ತಾರೆ ವ್ಯಾಪಾರಿ ಮಹಾಂತೇಶ ಬಳಿಗೇರ.
ತಾಲೂಕಿನಲ್ಲಿ ಯರಿ ಭೂಮಿಯ ಸೂಡಿ, ಕಳಕಾಪುರ, ನಿಡಗುಂದಿ, ಕೊಡಗಾನೂರ, ಹಾಳಕೇರಿ, ಮಾರನಬಸರಿ ಭಾಗದಲ್ಲಿ ಹೆಚ್ಚು ಹಾನಿಯಾಗಿದೆ. ಕೆಲವೆಡೆ ಜಮೀನು ಜಲಾವೃತವಾದರೆ, ಮತ್ತೆ ಕೆಲವೆಡೆ ಮಳೆ ನೀರಿನಿಂದ ಉಳ್ಳಾಗಡ್ಡಿ ಕೊಚ್ಚಿ ಹೋಗಿದೆ.
ತಾಲೂಕಿನಲ್ಲಿ 3500 ಹೆಕ್ಟೇರ್ ಪೈಕಿ 1500 ಹೆಕ್ಟೇರ್ಗಿಂತ ಹೆಚ್ಚು ಉಳ್ಳಾಗಡ್ಡಿ ಬೆಳೆ ಹಾನಿಯಾಗಿದೆ. ಕಂದಾಯ ಹಾಗೂ ಕೃಷಿ ಇಲಾಖೆ ಜಂಟಿ ಸಮೀಕ್ಷೆ ನಡೆಸಲಾಗುತ್ತಿದ್ದು, ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು.
| ಎಂ.ಎಂ. ತಾಂಬೋಟಿ, ತೋಟಗಾರಿಕೆ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ, ರೋಣ