ಶ್ರೀಧರ ಅಣಲಗಾರ ಯಲ್ಲಾಪುರ
ಉದ್ಯೋಗಕ್ಕಾಗಿ ಬೆಂಗಳೂರಿನಲ್ಲಿ ನೆಲೆಸಿದ್ದ ತಾಲೂಕಿನ ಸಾವಿರಾರು ಜನರು ಕರೊನಾ ಲಾಕ್ಡೌನ್ ವೇಳೆ ಊರಿಗೆ ವಾಪಸಾಗಿದ್ದಾರೆ. ಇದೀಗ ಲಾಕ್ಡೌನ್ ಸಡಿಲಿಕೆಯಾದ ನಂತರ ಕಚೇರಿಗೆ ಮರಳುವಂತೆ ಅವರಿಗೆ ಕರೆ ಬರುತ್ತಿದೆ. ಆದರೆ, ಒಂದೆಡೆ ಹೋಗಲು ಆತಂಕ, ಮತ್ತೊಂದೆಡೆ ಹೋಗಲೇಬೇಕಾದ ಅನಿವಾರ್ಯತೆಯಿಂದಾಗಿ ಉಭಯ ಸಂಕಟಕ್ಕೆ ಸಿಲುಕುವಂತೆ ಮಾಡಿದೆ.
ತಾಲೂಕಿನ ಸಾವಿರಾರು ಮಂದಿ ಇಂಜಿನಿಯರ್, ಶಿಕ್ಷಕರು, ಅರ್ಚಕರು, ಉದ್ಯಮಿಗಳು, ಕಾರ್ವಿುಕರು ಸೇರಿ ವಿವಿಧ ಕ್ಷೇತ್ರಗಳಲ್ಲಿ ಉದ್ಯೋಗಿಗಳಾಗಿ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಮಾರ್ಚ್ ತಿಂಗಳಿನಲ್ಲಿ ಲಾಕ್ಡೌನ್ ಆದ ನಂತರ ಈ ಪೈಕಿ ಶೇ. 80ರಷ್ಟು ಜನ ಊರಿಗೆ ಮರಳಿದ್ದಾರೆ. ವರ್ಕ್ ಫ್ರಂ ಹೋಂ ಎನ್ನುತ್ತಿದ್ದಂತೆ ಮನೆಯಲ್ಲಿ ನೆಟ್ವರ್ಕ್ ಬಾರದಿದ್ದರೂ ಆಂಟೆನಾ ಹಾಕಿಸಿಯೋ ಅಥವಾ ಬೆಟ್ಟ-ಗುಡ್ಡಗಳನ್ನು ಹತ್ತಿ ನೆಟ್ವರ್ಕ್ ಬರುವಲ್ಲಿ ಕುಳಿತಾದರೂ ಕೆಲಸ ನಿರ್ವಹಿಸುತ್ತಿದ್ದರು. ಕಳೆದ 8-10 ದಿವಸಗಳಿಂದ ಲಾಕ್ಡೌನ್ ಸಡಿಲಿಕೆಯಾಗಿದ್ದು, ಬೆಂಗಳೂರಿನಲ್ಲಿ ಎಂದಿನಂತೆ ಕಚೇರಿಗಳು ಕಾರ್ಯಾರಂಭಿಸುತ್ತಿವೆೆ. ಹೀಗಾಗಿ, ಮರಳಿ ಬರುವಂತೆ ಉದ್ಯೋಗಿಗಳಿಗೆ ಕರೆ ಬರುತ್ತಿದೆ.
ಕಚೇರಿಯಿಂದ ಕರೆ ಬರುತ್ತಿದ್ದಂತೆಯೇ ಕೆಲವರು ಒಲ್ಲದ ಮನಸ್ಸಿನಿಂದಲೇ ಬೆಂಗಳೂರಿನತ್ತ ಮುಖ ಮಾಡುತ್ತಿದ್ದಾರೆ. ಆದರೆ, ದಿನೇ ದಿನೆ ಹೆಚ್ಚುತ್ತಿರುವ ಕರೊನಾ ಪ್ರಕರಣಗಳು ಬೆಂಗಳೂರಿನತ್ತ ಪಯಣ ಬೆಳೆಸಲು ಆತಂಕಪಡುವಂತೆ ಮಾಡಿದೆ. ಕುಟುಂಬದವರು ಸಹ ಮರಳಿ ಬೆಂಗಳೂರಿಗೆ ಹೋದರೆ ಅಪಾಯವಿದೆ. ಹೋಗುವುದು ಬೇಡ ಎಂದು ಹೇಳುತ್ತಿದ್ದಾರೆ. ಬೆಂಗಳೂರಿನಲ್ಲಿ ಉದ್ಯೋಗ ಗಿಟ್ಟಿಸಿಕೊಂಡು, ಬದುಕು ಕಟ್ಟಿಕೊಳ್ಳುತ್ತಿದ್ದವರಿಗೆ ಅದನ್ನು ಬಿಡುವುದು ಕೂಡ ಕಷ್ಟದ ಮಾತು. ಊರಲ್ಲೇ ಉಳಿದು ಏನು ಮಾಡುವುದು ಎಂಬ ಪ್ರಶ್ನೆ ಮೂಡಿದೆ. ಮರಳಿ ಹೋದರೂ ಕಷ್ಟ, ಹೋಗದಿದ್ದರೂ ಕಷ್ಟ ಎಂಬಂತಾಗಿದೆ.
ಎರಡು ತಿಂಗಳಿಂದ ಊರಲ್ಲಿದ್ದೇನೆ. ಇದೀಗ ಆಫೀಸ್ನವರು ಮರಳಿ ಬರುವಂತೆ ಹೇಳಿದ್ದಾರೆ. ಆದರೆ, ಹೋಗುವುದಕ್ಕೆ ಮನೆಯಲ್ಲಿ ವಿರೋಧ ವ್ಯಕ್ತವಾಗುತ್ತಿದೆ. ಗೊತ್ತಿದ್ದರೂ ಅಪಾಯದತ್ತ ಹೋಗುವುದು ಬೇಡ ಎಂದು ಹೇಳುತ್ತಿದ್ದಾರೆ. ಇದರಿಂದ ಗೊಂದಲ ಉಂಟಾಗಿದೆ.
| ಆದಿತ್ಯ ಮಾನೆ, ಐಟಿ ಉದ್ಯೋಗಿ