More

    ಉದಾರವಾದಿ ಕಥಾ ಪರಂಪರೆ ಮುಂದುವರಿಸಿದ್ದ ಶಾಂತಾದೇವಿ

    ಕನ್ನಡದ ಹಿರಿಯ ಕವಿ ನಾಡೋಜ ಚೆನ್ನವೀರ ಕಣವಿ ಅವರ ಬಾಳ ಸಂಗಾತಿ ಶಾಂತಾದೇವಿ ಕಣವಿ ಅವರು ನಿಧನರಾದದ್ದು ಕನ್ನಡಲೋಕಕ್ಕೆ ಅಪಾರ ದುಃಖವಾಗಿದೆ. ಶಾಂತಾದೇವಿ ಕಣವಿ ಅವರು ಖ್ಯಾತ ಕಥೆಗಾರ್ತಿಯಾಗಿದ್ದು, ಕಳೆದ ಅರ್ಧ ಶತಮಾನದಿಂದ ಬರೆಯುತ್ತಿದ್ದರು.

    ಸಂಜೆ ಮಲ್ಲಿಗೆ (1958), ಬಯಲು ಆಲಯ (1973), ಮರು ವಿಚಾರ (1978), ಜಾತ್ರೆ ಮುಗಿದಿತ್ತು (1981), ಕಳಚಿಬಿದ್ದ ಪೈಜಣ (1983), ನೀಲಿಮಾ ತೀರ (1992), ಗಾಂಧಿ ಮಗಳು (1997) ಕಥಾ ಸಂಕಲನಗಳು ಪ್ರಕಟವಾಗಿವೆ. ಶಾಂತಾದೇವಿ ಕಣವಿ ಅವರ ಕಥಾಮಂಜರಿ ಸಮಗ್ರ ಕಥೆಗಳ 2 ಸಂಪುಟಗಳನ್ನು ಬೆಂಗಳೂರಿನ ಪ್ರಿಯದರ್ಶಿನಿ ಪ್ರಕಾಶನ ಪ್ರಕಟಿಸಿದೆ.

    ಕನ್ನಡದಲ್ಲಿ ಮಹಿಳೆಯರು ಸಾಹಿತ್ಯ ರಚನೆಗೆ ಹೆಚ್ಚಾಗಿ ತೊಡಗಿಕೊಳ್ಳದಿದ್ದ ಕಾಲದಲ್ಲಿ ಬರವಣಿಗೆ ಆರಂಭಿಸಿದ ಶಾಂತಾದೇವಿ ಕಣವಿ ಅವರು 1958ರಲ್ಲಿ ತಮ್ಮ ಮೊದಲ ಕಥೆ ‘ಸ್ವರೂಪ ದರ್ಶನ’ ಪ್ರಕಟಿಸಿದರು. ಕಥೆಗಳಲ್ಲಿ ಉತ್ತರ ಕರ್ನಾಟಕದ ಗ್ರಾಮೀಣ ಜೀವನದ ಸಂಸ್ಕೃತಿಯನ್ನು ಅನಾವರಣಗೊಳಿಸಿದ್ದಾರೆ. ಮಾಸ್ತಿ ಪರಂಪರೆಯ ಉದಾರವಾದಿ ಕಥನ ಪರಂಪರೆಯನ್ನು ಶಾಂತಾದೇವಿ ಕಣವಿ ಅವರು ತಮ್ಮ ಕಥೆಗಳಲ್ಲಿ ಮುನ್ನಡೆಸಿದ್ದಾರೆ. ಅವರು ಬರೆಯಲು ಆರಂಭಿಸಿದಾಗ ನವ್ಯತೆ ಬಂದಿದ್ದರೂ, ಕೌಟುಂಬಿಕ ಜೀವನದ ಬದುಕನ್ನು ಮಾನವತಾವಾದಿ ನೆಲೆಯಲ್ಲಿ ಚಿತ್ರಿಸಿದ್ದಾರೆ.

    ಚೆನ್ನವೀರ ಕಣವಿ ಹಾಗೂ ಶಾಂತಾದೇವಿ ಕಣವಿಯವರದ್ದು ಪ್ರೇಮ ವಿವಾಹ. ಕಣವಿಯವರ ಕವಿತಾ ಸಂಕಲನ ಕಾವ್ಯಾಕ್ಷಿಯ ಭಾವಗೀತೆಗಳನ್ನು ಸುಶ್ರಾವ್ಯವಾಗಿ ಶಾಂತಾದೇವಿ ಹಾಡುತ್ತಿದ್ದರು. ಅವರಿಬ್ಬರ ನಡುವೆ ಪತ್ರ ವ್ಯವಹಾರ ಆಯಿತು. ಪರಸ್ಪರ ಪ್ರೀತಿಯಿಂದ ಒಪ್ಪಿಕೊಂಡು 1952ರಿಂದ ಇಂದಿನವರೆಗೆ ಅನ್ಯೋನ್ಯ ದಾಂಪತ್ಯ ಜೀವನ ನಡೆಸಿದ್ದಾರೆ.

    ಚೆನ್ನವೀರ ಕಣವಿ ಅವರು ಕನ್ನಡ ಕಾವ್ಯ ಲೋಕದಲ್ಲಿ ಅನನ್ಯ ಸಾಧನೆ ಮಾಡಿದರೆ, ಶಾಂತಾದೇವಿ ಅವರು ಮಹಿಳಾ ಕಥಾ ಸಾಹಿತ್ಯದಲ್ಲಿ ಅಪಾರ ಸಾಧನೆ ಮಾಡಿದ್ದಾರೆ. ಎಲ್ಲರೂ ಸ್ತ್ರೀವಾದಿ ಚಿಂತನೆ ಬಗೆಗೆ ಮಾತನಾಡಿದರೆ, ಶಾಂತಾದೇವಿ ಅವರು ಸ್ತ್ರೀ ಪುರುಷ ಸಮಾನತೆ, ಸಮನ್ವಯ, ಸಮತೋಲನದ ನಿಲುವನ್ನು ವ್ಯಕ್ತಪಡಿಸಿದ್ದಾರೆ. ಅವರು ಈ ಬಗ್ಗೆ ಹೇಳಿದ ವಿಚಾರಗಳಿವು; ಸ್ತ್ರೀವಾದಿ ಚಿಂತಕರಲ್ಲಿ ಉಗ್ರವಾದಿಗಳೂ ಸೌಮ್ಯವಾದಿಗಳೂ ಇದ್ದಾರೆ. ಸ್ತ್ರೀಯ ಅಭಿವ್ಯಕ್ತಿ ಸ್ವಾತಂತ್ರ್ಯ ಸರಿಯೇ. ಸ್ತ್ರೀ ಪುರುಷ ಭೇದ ಕುಟುಂಬ ವ್ಯವಸ್ಥೆಯನ್ನೂ, ಸಮಾಜ ವ್ಯವಸ್ಥೆಯನ್ನೂ ಒಡೆಯಲು ದಾರಿ ಮಾಡಿಕೊಡುತ್ತದೆ. ಮಹಿಳೆ ತನ್ನ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಬೇಕು. ಆದರೆ ಸ್ವಾತಂತ್ರ್ಯ ಹೆಸರಿನಲ್ಲಿ ದುರುಪಯೋಗ ಮಾಡಿಕೊಳ್ಳುವುದು ಸರಿಯಲ್ಲ. ಈ ವಿವೇಕ ಸ್ತ್ರೀವಾದಿ ಚಿಂತಕರಲ್ಲಿ ಅವಶ್ಯಕವಾಗಿ ಇರಬೇಕು. ಬದುಕು ಹಾಗೂ ಸಾಹಿತ್ಯದಲ್ಲಿ ಸ್ತ್ರೀ, ಪುರುಷ ಸಂಬಂಧಗಳ ಅನ್ಯೋನ್ಯತೆಯನ್ನು ಕಣವಿ ದಂಪತಿ ಅನುಸರಿಸುವ ಮೂಲಕ ಕನ್ನಡ ಸಾಹಿತಿ ದಂಪತಿಗಳಲ್ಲಿ ಮಾದರಿ ಹಾಕಿ ಕೊಟ್ಟಿದ್ದಾರೆ.

    ಶಾಂತಾದೇವಿ ಕಣವಿ ಅವರು ವಿಜ್ಞಾನಿ ಶಿವಾನಂದ ಕಣವಿ, ಕ್ರಿಕೆಟ್ ವೀಕ್ಷಕ ವಿವರಣೆಕಾರ ಚಂದ್ರಮೌಳಿ ಕಣವಿ, ತಂತ್ರ ವಿಜ್ಞಾನಿ ಪ್ರಿಯದರ್ಶಿನಿ ಕಣವಿ, ಕರುಣಪ್ರಸಾದ ಕಣವಿ ಅವರ ತಾಯಿ. ಅವರ ಒಬ್ಬಳೇ ಮಗಳು ರಂಜನಾ ಬೆಳಗಾವಿಯ ಡಾ. ಅಶೋಕ ಗೋಧಿ ಅವರನ್ನು ವಿವಾಹವಾಗಿದ್ದು, ಪ್ರಾಧ್ಯಾಪಕಿ ಸೇವೆಯಿಂದ ನಿವೃತ್ತರಾಗಿದ್ದಾರೆ. ಪ್ರತಿಭಾವಂತ ಮಕ್ಕಳನ್ನು ಪಡೆದ ಶಾಂತಾದೇವಿ ಕಣವಿ ಅವರು ಆದರ್ಶ ಗೃಹಿಣಿಯಾಗಿದ್ದರು. ಸ್ನೇಹ, ಪ್ರೀತಿ, ಮಾನವೀಯ ಅಂತಃಕರಣಗಳ ನಾಡಿನ ಅಪರೂಪದ ಲೇಖಕಿಯಾಗಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts