ದಾವಣಗೆರೆ: ಮೂತ್ರಪಿಂಡ ಸಮಸ್ಯೆಯಿಂದ ಬಳಲುವ ಬಡ ರೋಗಿಗಳು ಎಸ್ಸೆಸ್ ಸಾರ್ವಜನಿಕ ಆಸ್ಪತ್ರೆಯಲ್ಲಿ ಉಚಿತ ಡಯಾಲಿಸಿಸ್ ಚಿಕಿತ್ಸೆಯನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಬಾಪೂಜಿ ಸಂಸ್ಥೆಯ ಗೌರವ ಕಾರ್ಯದರ್ಶಿ, ಶಾಸಕ ಡಾ. ಶಾಮನೂರು ಶಿವಶಂಕರಪ್ಪ ಮನವಿ ಮಾಡಿದರು.
ಎಸ್ಎಸ್ ಕೇರ್ ಟ್ರಸ್ಟ್ ವತಿಯಿಂದ ಕೆ.ಆರ್.ರಸ್ತೆಯಲ್ಲಿನ ಎಸ್ಸೆಸ್ ಸಾರ್ವಜನಿಕ ಆಸ್ಪತ್ರೆಯಲ್ಲಿ 88 ಲಕ್ಷ ರೂ. ವೆಚ್ಚದಲ್ಲಿ ಅಳವಡಿಸಲಾದ ಹೆಚ್ಚುವರಿ ಡಯಾಲಿಸಿಸ್ ಘಟಕಕ್ಕೆ ಸೋಮವಾರ ಚಾಲನೆ ನೀಡಿ ಮಾತನಾಡಿದರು.
ದಾವಣಗೆರೆ ದಕ್ಷಿಣ ಭಾಗದ ಜನರ ಅನುಕೂಲಕ್ಕಾಗಿ ಕಟ್ಟಲಾದ ಈ ಆಸ್ಪತ್ರೆಯಲ್ಲಿ ಆರಂಭದಲ್ಲಿ 4 ಡಯಾಲಿಸಿಸ್ ಯಂತ್ರಗಳಿದ್ದವು. ಹೆಚ್ಚು ರೋಗಿಗಳು ಬರುತ್ತಿದ್ದ ಹಿನ್ನೆಲೆಯಲ್ಲಿ 2022ರಲ್ಲಿ ಇತರೆ 4 ಯಂತ್ರಗಳನ್ನು ನೀಡಲಾಯಿತು. ಮತ್ತೆ ಇದೀಗ ಬೇಡಿಕೆಯಂತೆ ನಾಲ್ಕು ಡಯಾಲಿಸಿಸ್ ಯಂತ್ರಗಳನ್ನು ನೀಡಲಾಗಿದೆ.
ಚಿಕಿತ್ಸೆ ಮೊದಲಿನಿಂದಲೂ ಉಚಿತವಾಗಿದೆ. ಇದುವರೆಗೆ ಒಬ್ಬ ರೋಗಿಗೆ ಬಳಸುತ್ತಿದ್ದ ಡಯಲೈಸರ್ ಸಾಧನದ ವೆಚ್ಚ (200 ರೂ.)ವನ್ನು ಇನ್ನು ಮುಂದೆ ರೋಗಿಗಳಿಂದ ಪಡೆಯದಂತೆ ಇಲ್ಲಿನ ಆಡಳಿತ ಮಂಡಳಿಗೆ ಸೂಚನೆ ನೀಡಲಾಗಿದೆ. ತುರ್ತು ಚಿಕಿತ್ಸೆಯ ರೋಗಿಗಳಿಗಾಗಿ ಆಸ್ಪತ್ರೆಯಲ್ಲಿ ನೂತನ ಆ್ಯಂಬುಲೆನ್ಸ್ ಖರೀದಿಸಿ ಸೇವೆ ಒದಗಿಸಲಾಗುತ್ತಿದೆ ಎಂದು ತಿಳಿಸಿದರು.
ದಾವಣಗೆರೆಯ ಬಾಪೂಜಿ ವೈದ್ಯಕೀಯ ಕಾಲೇಜನ್ನು ಟರ್ಕಿ ತಂತ್ರಜ್ಞಾನದಡಿ ಒಟ್ಟು 500 ಕೋಟಿ ರೂ. ವೆಚ್ಚದಲ್ಲಿ ನವೀಕರಣಗೊಳಿಸಲಾಗುತ್ತಿದೆ. ಎರಡು ವರ್ಷದಲ್ಲಿ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದು ತಿಳಿಸಿದರು.
ದೂಡಾ ಮಾಜಿ ಅಧ್ಯಕ್ಷ ಅಯೂಬ್ ಪೈಲ್ವಾನ್ ಮಾತನಾಡಿದರು.
ಬಾಪೂಜಿ ಮಕ್ಕಳ ಆಸ್ಪತ್ರೆಯ ನಿರ್ದೇಶಕ ಮಕ್ಕಳ ತಜ್ಞ ಡಾ. ಮೂಗನಗೌಡ ಪಾಟೀಲ್, ಬಾಪೂಜಿ ಆಸ್ಪತ್ರೆ ವೈದ್ಯಕೀಯ ನಿರ್ದೇಶಕ ಡಾ.ಡಿ.ಎಸ್.ಕುಮಾರ್, ಜೆಜೆಎಂ ವೈದ್ಯಕೀಯ ಕಾಲೇಜು ಮಹಾವಿದ್ಯಾಲಯದ ಪ್ರಾಚಾರ್ಯ ಎಸ್.ಬಿ. ಮುರುಗೇಶ್, ಎಸ್ಎಸ್ಐಎಂಎಸ್ನ ಪ್ರಾಚಾರ್ಯ ಡಾ. ಬಿ.ಎಸ್.ಪ್ರಸಾದ್, ಜೆಜೆಎಂ ವೈದ್ಯಕೀಯ ಕಾಲೇಜಿನ ಆಡಳಿತ ನಿರ್ದೇಶಕ ಟಿ.ಸತ್ಯನಾರಾಯಣ, ಮುಖಂಡರಾದ ಸೈಯದ್ ಸೈಫುಲ್ಲಾ, ಪಾಲಿಕೆ ವಿಪಕ್ಷ ನಾಯಕ ಗಡಿಗುಡಾಳ್ ಮಂಜುನಾಥ ಇತರರಿದ್ದರು.
—-