ಬೆಳಗಾವಿ: ತಾಲೂಕಿನ ಸುಳೇಭಾವಿ ಗ್ರಾಮದಲ್ಲಿ ಗುರುವಾರ ರಾತ್ರಿ ನಡೆದ ರೌಡಿಶೀಟರ್ ಸೇರಿ ಇಬ್ಬರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರು ಜನರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. ಇಬ್ಬರು ಪೊಲೀಸರನ್ನು ಆಯುಕ್ತ ಡಾ.ಬೋರಲಿಂಗಯ್ಯ ಶುಕ್ರವಾರ ಅಮಾನತು ಮಾಡಿದ್ದಾರೆ. ಕರ್ತವ್ಯಲೋಪದ ಹಿನ್ನೆಲೆಯಲ್ಲಿ ಮುಖ್ಯ ಪೇದೆ ಬಿ.ಎನ್.ಬಳಗನ್ನವರ, ಪೇದೆ ಆರ್.ಎಸ್.ತಳೆವಾಡಿ ಅಮಾನತುಗೊಂಡವರು. ವಶಕ್ಕೆ ಪಡೆದಿರುವ ಆರೂ ಜನರು ಸುಳೇಭಾವಿ ಗ್ರಾಮದವರೇ ಆಗಿದ್ದು, ಒಂದೇ ಸಮುದಾಯಕ್ಕೆ ಸೇರಿದ್ದಾರೆ. ಕೆಲವರು ಮೃತರ ಸಂಬಂಧಿಗಳು ಎನ್ನಲಾಗುತ್ತಿದೆ. ಅಲ್ಲದೇ, ಎಲ್ಲರೂ ಕ್ರೌರ್ಯ ಹಾಗೂ ಸೇಡಿನ ಕುರಿತಾದ ರೀಲ್ಸ್ ಮಾಡುತ್ತಿದ್ದರು ಎಂಬ ಮಾಹಿತಿ ಇದ್ದು, ಕೊಲೆಯಾದ ಮಹೇಶ ಮುರಾರಿ ಗೋಕಾಕನ ಟೈಗರ್ ಗ್ಯಾಂಗ್ ಜತೆ ಸಂಬಂಧ ಹೊಂದಿರುವ ಶಂಕೆಯಿದ್ದು, ತನಿಖೆ ನಡೆಯುತ್ತಿದೆ. ಗುರುವಾರ ತಡರಾತ್ರಿ 6 ರಿಂದ 7 ಜನರು ಮಾರಕಾಸ್ತ್ರಗಳಿಂದ ಕೊಚ್ಚಿ ಪ್ರಕಾಶ ಪಾಟೀಲ ಹಾಗೂ ಮಹೇಶ ಮುರಾರಿ ಅವರನ್ನು ಹತ್ಯೆಗೈದಿದ್ದರು. ಆರೋೀಪಿಗಳ ಶೋಧಕ್ಕಾಗಿ ಬೆಳಗಾವಿ ಗ್ರಾಮೀಣ ಎಸಿಪಿ ಗಿರೀಶ ಹಾಗೂ ಮಾರಿಹಾಳ ಸಿಪಿಐ ನೇತೃತ್ವದಲ್ಲಿ ತಂಡ ರಚಿಸಿ, ತನಿಖೆ ನಡೆಸಲಾಗುತ್ತಿದೆ. ಹತ್ಯೆಗೈದ ಸ್ಥಳದಲ್ಲಿನ ಸಿಸಿ ಕ್ಯಾಮರಾದ ದೃಶ್ಯಾವಳಿ ಸಂಗ್ರಹಿಸಿರುವ ಪೊಲೀಸರು ಪರಿಶೀಲಿಸುತ್ತಿದ್ದಾರೆ. ಎರಡು ಮೂರು ದಿನಗಳ ಹಿಂದೆ ಕ್ಷುಲ್ಲಕ ಕಾರಣಕ್ಕೆ ಗಲಾಟೆ ನಡೆದು, ಕೊಲೆಗೀಡಾದ ಪ್ರಕಾಶ ಪಾಟೀಲ ಆರೋಪಿಗಳಿಗೆ ಬೆದರಿಕೆಯೊಡ್ಡಿದ್ದ ಎನ್ನಲಾಗಿದೆ. ಮಹೇಶ ಮುರಾರಿ 2019ರಲ್ಲಿ ನಡೆದ ಕೊಲೆ ಪ್ರಕರಣದ ಆರೋಪಿಯಾಗಿದ್ದು, ಪ್ರಕರಣದ ತನಿಖೆ ಚುರುಕುಗೊಳಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.