ಹುಬ್ಬಳ್ಳಿ: ಹಳೇ ಹುಬ್ಬಳ್ಳಿ ಪಠಾಣ ಗಲ್ಲಿಯಲ್ಲಿ ಬುಧವಾರ ಹಾಡಹಗಲೇ ಎನ್ಎ ನಗರದ ಶಾಬುದ್ದೀನ ಬಿಕ್ಕನಬಾಯಿ (21) ಎಂಬಾತನನ್ನು ಬರ್ಬರವಾಗಿ ಹತ್ಯೆಗೈದಿದ್ದ ಇಬ್ಬರು ಆರೋಪಿಗಳನ್ನು ಕಸಬಾಪೇಟ ಠಾಣೆ ಪೊಲೀಸರು ಗುರುವಾರ ಬಂಧಿಸಿದ್ದಾರೆ.
ಸದರಸೋಫಾ ನಿವಾಸಿ ಶಂಶುದ್ದೀನ ಹಾಜೀಸಾಬ ಸವಣೂರ (24) ಹಾಗೂ ಪಠಾಣಗಲ್ಲಿಯ ಜುಬೇರಹ್ಮದ ಹಾಜಿ ಅಬ್ದುಲಖಾದರ ಜೈಲಾನಿ ಕಲಬುರ್ಗಿ (24) ಬಂಧಿತರು.
ಶಾಬುದ್ದೀನ, ಶಂಶುದ್ದೀನ ಹಾಗೂ ಹಾಜಿ ಕಲಬುರ್ಗಿ ನಡುವೆ ಬುಧವಾರ ಕ್ಷುಲ್ಲಕ ಕಾರಣಕ್ಕೆ ಜಗಳವಾಗಿತ್ತು. ಜಗಳ ವಿಕೋ ಪಕ್ಕೆ ತಿರುಗಿ ದಾಗ ಶಾಬುದ್ದೀನ್ಗೆ 12 ಬಾರಿ ಚಾಕು ಇರಿದು ಪರಾರಿಯಾಗಿದ್ದರು. ಈ ಕುರಿತು ಶಾಬುದ್ದೀನ ತಂದೆ ಮಹಬೂಬಸಾಬ ಬಿಕನಬಾಯಿ ಕಸಬಾಪೇಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.
ಪೊಲೀಸರಿಗೆ ಬಹುಮಾನ: ತಡಸ ಡಾಬಾವೊಂದರಲ್ಲಿ ಬಚ್ಚಿಟ್ಟುಕೊಂಡಿದ್ದ ಆರೋಪಿಗಳನ್ನು 24 ಗಂಟೆಯೊಳಗೆ ಬಂಧಿಸುವಲ್ಲಿ ಇನ್ಸ್ಪೆಕ್ಟರ್ ಶ್ಯಾಮರಾವ್ ಸಜ್ಜನ ನೇತೃತ್ವದ ತಂಡ ಯಶಸ್ವಿಯಾಗಿದೆ.
ಸಿಬ್ಬಂದಿ ಐ.ಕೆ. ಧಾರವಾಡ, ಎ.ಎಂ. ತಹಸೀಲ್ದಾರ, ಎಂ.ಎಂ. ಕಡೇಮನಿ, ಆರ್.ಎನ್. ಕೋಳಿ, ಬಿ.ವಿ. ಸಣ್ಣಪ್ಪನವರ, ರವಿಕುಮಾರ್ ಕುರಿ ತಂಡದಲ್ಲಿದ್ದರು. ಈ ತಂಡಕ್ಕೆ ಪೊಲೀಸ್ ಆಯುಕ್ತರು ಬಹುಮಾನ ಘೊಷಿಸಿದ್ದಾರೆ.
ಮೂವರೂ ಸ್ನೇಹಿತರು!: ಶಾಬುದ್ದೀನ, ಶಂಶುದ್ದೀನ ಹಾಗೂ ಹಾಜಿ ಮೂವರೂ ಸ್ನೇಹಿತರು. ಕ್ಷುಲ್ಲಕ ಕಾರಣಕ್ಕೆ ಜಗಳವಾಡುತ್ತಿದ್ದರು.
ಮಂಗಳವಾರ ರಾತ್ರಿ ‘ಯಾಕೆ ಗುರಾಯಿಸುತ್ತೀಯಾ? ನಾಳೆ ನಿನಗೆ ಮಾಡ್ತೀನಿ’ ಎಂದು ಶಂಶುದ್ದೀನ, ಶಾಬುದ್ದೀನನೊಂದಿಗೆ ಜಗಳ ತೆಗೆದಿದ್ದ. ಹಿರಿಯರು ಜಗಳ ಬಿಡಿಸಿ ಕಳುಹಿಸಿದ್ದರು. ಬುಧವಾರ ಮಧ್ಯಾಹ್ನ ಪಠಾಣ ಗಲ್ಲಿಯಲ್ಲಿ ಶಾಬುದ್ದೀನನ ಕೊಲೆ ಮಾಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.