ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ಆಶಾಕಿರಣ ಶಿಕ್ಷಣ ಕಾರ್ಯಕ್ರಮದ ಜತೆಗೆ ವಿದ್ಯಾಗಮ ಯೋಜನೆಯನ್ನೂ ಯಶಸ್ವಿಯಾಗಿ ಅನುಷ್ಠಾನಗೊಳಿಸುವಂತೆ ಜಿಲ್ಲಾ ಪಂಚಾಯಿತಿ ಸಿಇಒ ಬಿ.ಫೌಜೀಯಾ ತರನ್ನುಮ್ ಅಧಿಕಾರಿಗಳಿಗೆ ಸೂಚಿಸಿದರು.
ಸರ್ಕಾರಿ ಶಾಲೆಗಳನ್ನು ಮಾದರಿ ಶಾಲೆಗಳನ್ನಾಗಿಸುವ ಅಭಿವೃದ್ಧಿ ಯೋಜನೆ ಸಂಬಂಧ ಜಿಪಂ ಸಭಾಂಗಣದಲ್ಲಿ ಸೋಮವಾರ ಅಧಿಕಾರಿಗಳ ಸಭೆ ನಡೆಸಿದ ಅವರು, 2019-20ನೇ ಸಾಲಿನಲ್ಲಿ ಕೈಗೊಂಡ ಶೈಕ್ಷಣಿಕ ಸುಧಾರಣಾ ಕ್ರಮಗಳನ್ನು 2020-21ನೇ ಸಾಲಿನಲ್ಲೂ ಕಾರ್ಯರೂಪಕ್ಕೆ ತರುವಂತೆ ತಾಕೀತು ಮಾಡಿದರು.
ಪ್ರೌಢಶಾಲೆ ವಿದ್ಯಾರ್ಥಿಗಳಿಗಾಗಿ ಈಗಾಗಲೇ ತಯಾರಿಸಲ್ಪಟ್ಟ ವಿಷಯಾವಾರು ಮಾದರಿ ಪ್ರಶ್ನೆಪತ್ರಿಕೆಗಳ ವರ್ಕ್ಶೀಟ್ಸ್ ನೀಡಿ, ಪಠ್ಯದ ವಿಷಯವನ್ನು ಸರಳವಾಗಿ ಅರ್ಥೈಸುವ ನಿಟ್ಟಿನಲ್ಲಿ ಕ್ರಮವಹಿಸುವಂತೆ ಸೂಚಿಸಿದರು.
ಜಿಲ್ಲೆಯಲ್ಲಿ 1,577 ಸರ್ಕಾರಿ ಶಾಲೆಗಳಿದ್ದು, ಎಸ್ಸೆಸ್ಸೆಲ್ಸಿ ಪಾಸಾದ ವಿದ್ಯಾರ್ಥಿಗಳು ಮುಂದಿನ ಅಭ್ಯಾಸಕ್ಕೆ ದಾಖಲಾಗಿದ್ದಾರೆ? ಇಲ್ಲವೆ? ಎಂಬುದನ್ನು ಆಶಾಕಿರಣ ಯೋಜನೆ ಶಿಕ್ಷಕರ ಖಾತ್ರಿಪಡಿಸಿಕೊಳ್ಳಬೇಕು. ಬಡತನ ಸೇರಿ ಇತರ ಕಾರಣಗಳಿಂದ ದಾಖಲಾಗದ ವಿದ್ಯಾರ್ಥಿಗಳ ಮಾಹಿತಿ ಸಂಗ್ರಹಿಸಿ, ಅವರ ವಿದ್ಯಾಭ್ಯಾಸಕ್ಕೆ ಅಗತ್ಯ ವ್ಯವಸ್ಥೆ ಮಾಡಬೇಕು, ಜತೆಗೆ ಸೂಕ್ತ ಕೋರ್ಸ್ ಬಗ್ಗೆ ತಿಳಿವಳಿಕೆ ನೀಡಬೇಕು ಎಂದರು.
ಗುರುಕುಲ ವಿದ್ಯಾಭ್ಯಾಸ ಮಾದರಿಯ ವಿದ್ಯಾಗಮ ಯೋಜನೆಯನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಬೇಕು. ಎಸ್ಸೆಸ್ಸೆಲ್ಸಿ ಪಾಠಗಳನ್ನು ವರ್ಷದ ಡಿಸೆಂಬರ್ ಒಳಗೆ ಪೂರ್ಣಗೊಳಿಸಿ ಪರಿಷ್ಕರಣೆ ಮಾಡುವ ಮೂಲಕ ಮರು ಮನನ, ಅಭ್ಯಾಸಕ್ಕೆ ವ್ಯವಸ್ಥೆ ಮಾಡುವಂತೆ ಸಲಹೆ ನೀಡಿದರು.
ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಎಸ್.ಜಿ.ನಾಗೇಶ್, ಸಂಯೋಜನಾಧಿಕಾರಿಗಳಾದ ರಘುನಾಥರೆಡ್ಡಿ, ಶಿವಲಿಂಗಯ್ಯ ಮತ್ತಿತರರು ಇದ್ದರು.
ಪ್ರಸ್ತಾವನೆ ಸಲ್ಲಿಸಿದರೆ ಕ್ರಮ: ಗ್ರಾಮ ಪಂಚಾಯಿತಿ ಸಹಯೋಗದೊಂದಿಗೆ ಜಾಗದ ಲಭ್ಯತೆಗೆ ಅನುಗುಣವಾಗಿ ಶಾಲೆಗಳಲ್ಲಿ ಮಳೆನೀರು ಸಂರಕ್ಷಣೆ, ಕೈತೋಟ, ಕಟ್ಟಡ, ಕಾಂಪೌಂಡ್, ಕೊಠಡಿ ಮತ್ತು ಆಟದ ಮೈದಾನಗಳ ನಿರ್ಮಾಣ, ದಾನಿಗಳ ನೆರವಿನೊಂದಿಗೆ ಕಟ್ಟಡ ದುರಸ್ತಿ ಸೇರಿ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲು ಯೋಜನೆ ರೂಪಿಸುವಂತೆ ತಿಳಿಸಿದ ಸಿಇಒ ೌಜೀಯಾ ತರನ್ನುಮ್, ಶಾಲೆಗಳ ಮೂಲ ಸೌಕರ್ಯ, ಸಮಸ್ಯೆಗಳ ಬಗ್ಗೆ ಶಾಲಾವಾರು ಪ್ರಸ್ತಾವನೆ ಸಲ್ಲಿಸಿದರೆ, ಸೂಕ್ತ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.