ದಾವಣಗೆರೆ: ಭಾರತ ಸ್ವಾತಂತ್ರೃದ ಅಮೃತ ಮಹೋತ್ಸವ ಹಿನ್ನೆಲೆಯಲ್ಲಿ ‘ಸ್ವಸ್ಥ ಮನ, ಸ್ವಸ್ಥ ಮನೆ’ ಘೋಷವಾಕ್ಯದಡಿ ಆರೋಗ್ಯ ಮೇಳದ ಭಾಗವಾಗಿ ಜಿಲ್ಲಾಡಳಿತ, ಜಿಪಂ, ಡಿಎಚ್ಒ ಕಚೇರಿ, ಜಿಲ್ಲಾ ಸರ್ವೇಕ್ಷಣಾ ಘಟಕ, ಜಿಲ್ಲಾ ಯೋಗ ಒಕ್ಕೂಟ ಹಾಗೂ ವಿವಿಧ ಸ್ವಯಂಸೇವಾ ಸಂಸ್ಥೆಗಳ ಸಹಯೋಗದಲ್ಲಿ ನಗರದಲ್ಲಿ ಮಂಗಳವಾರ ಸೈಕಲ್ ಜಾಥಾ ನಡೆಸಲಾಯಿತು.
ನಿಜಲಿಂಗಪ್ಪ ಬಡಾವಣೆಯ ಕರ್ನಲ್ ರವೀಂದ್ರನಾಥ ವೃತ್ತದಲ್ಲಿ ಸೈಕಲ್ ಜಾಥಾಕ್ಕೆ ಡಿಎಚ್ಒ ಡಾ.ನಾಗರಾಜ್ ಚಾಲನೆ ನೀಡಿದರು. ಪ್ರತಿ ತಿಂಗಳ 14ನೇ ತಾರೀಕಿನಂದು ಎಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಉಪ ಆರೋಗ್ಯ ಕೇಂದ್ರಗಳಲ್ಲಿ ನಿಯಮಿತವಾಗಿ ಆರೋಗ್ಯ ಮೇಳ ನಡೆಯಲಿದೆ. ವೈದ್ಯಾಧಿಕಾರಿಗಳು, ಸಿಬ್ಬಂದಿ ಇರಲಿದ್ದು ನಾಗರಿಕರು ಇದರ ಲಾಭ ಪಡೆಯಬೇಕೆಂದರು.
ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಜಿ.ಡಿ.ರಾಘವನ್ ಮಾತನಾಡಿ ಅಸಾಂಕ್ರಾಮಿಕ ರೋಗಗಳಾದ ಅಧಿಕ ರಕ್ತದೊತ್ತಡ, ಮಧುಮೇಹ ಹಾಗೂ ಕ್ಯಾನ್ಸರ್ ಇತ್ಯಾದಿ ಪರೀಕ್ಷೆ ನಡೆಸಲಾಗುವುದು. ಬಾಯಿ, ಸ್ತನ ಹಾಗೂ ಗರ್ಭಕೋಶ ಕ್ಯಾನ್ಸರ್ ಇತ್ಯಾದಿಗೆ ಸರ್ಕಾರದಿಂದ ಉಚಿತ ತಪಾಸಣೆ ಹಾಗೂ ಚಿಕಿತ್ಸೆ ನೀಡಲಾಗುವುದು ಎಂದರು.
ಜಾಥಾದಲ್ಲಿ ಜಿಲ್ಲಾ ಮಲೇರಿಯಾ ನಿಯಂತ್ರಣಾಧಿಕಾರಿ ಡಾ.ನಟರಾಜ್, ಜಿಲ್ಲಾ ಕ್ಷಯ ರೋಗ ನಿಯಂತ್ರಣಾಧಿಕಾರಿ ಡಾ. ಗಂಗಾಧರ, ಜಿಲ್ಲಾ ಯೋಗ ಒಕ್ಕೂಟದ ಅಧ್ಯಕ್ಷ ವಾಸುದೇವ ರಾಯ್ಕರ್, ಜಿಲ್ಲಾ ಎನ್ಸಿಡಿ ಸಂಯೋಜಕ ಡಾ.ಮಂಜುನಾಥ, ಸಿಬ್ಬಂದಿ ಧನುಶ್ರೀ, ಶಬನಾಬಾನು, ಜಿಲ್ಲಾ ಬೈಸಿಕಲ್ ಸಮಿತಿಯ ಮಹೇಶ್ ಹಾಗೂ ಇತರರು ಪಾಲ್ಗೊಂಡಿದ್ದರು.
ರವೀಂದ್ರನಾಥ ವೃತ್ತದಿಂದ ಆರಂಭವಾದ ಜಾಥಾ, ಮುಖ್ಯರಸ್ತೆ ಮೂಲಕ ಪಿಬಿ ರಸ್ತೆ, ಅಭಿನವ ರೇಣುಕ ಮಂದಿರ, ಎವಿಕೆ ಕಾಲೇಜು ರಸ್ತೆ, ಹರಳೆಣ್ಣೆ ಕೊಟ್ರಬಸಪ್ಪ ವೃತ್ತ ಮೂಲಕ ಸ್ವಸ್ಥಾನಕ್ಕೆ ಮರಳಿತು