ಚಿತ್ರದುರ್ಗ: ಅಂಗನವಾಡಿ, ಆಶಾ, ಬಿಸಿಯೂಟ ಕಾರ್ಯಕರ್ತೆಯರಿಗೆ ಕ್ರಮವಾಗಿ 15, 8, 6 ಸಾವಿರ ರೂ., ಸಹಾಯಕಿಯರಿಗೆ 10 ಸಾವಿರ ರೂ. ಮಾಸಿಕ ಗೌರವಧನ ಹೆಚ್ಚಿಸುವ ಕಾಂಗ್ರೆಸ್ನ 6ನೇ ಗ್ಯಾರಂಟಿ ಜಾರಿಗೊಳಿಸಲು ಆಗ್ರಹಿಸಿ ಭಾರತ ಕಮ್ಯೂನಿಸ್ಟ್ ಪಕ್ಷದ ಜಿಲ್ಲಾ ಘಟಕದ ಕಾರ್ಯಕರ್ತರು ಶನಿವಾರ ಪ್ರತಿಭಟನೆ ನಡೆಸಿದರು.
ಸಿಪಿಐ ಕಚೇರಿಯಿಂದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ನಡೆಸಿದರು. ಜಿಲ್ಲಾಧಿಕಾರಿ ಕಚೇರಿ ಎದುರು ಕೆಲಕಾಲ ಪ್ರತಿಭಟಿಸಿದರು. ಕೊಟ್ಟ ಭರವಸೆ ಈಡೇರಿಸಬೇಕು ಎಂದು ಸಿಎಂ, ಡಿಸಿಎಂಗೆ ಒತ್ತಾಯಿಸಿ ಜಿಲ್ಲಾಡಳಿತದ ಮೂಲಕ ಮನವಿ ರವಾನಿಸಿದರು.
ರಾಜ್ಯದಲ್ಲಿ ಹಿಂದಿನ ಸರ್ಕಾರ ಜಾರಿಗೊಳಿಸಿದ್ದ ಕೃಷಿ, ಎಪಿಎಂಸಿ ಕಾಯ್ದೆ ರದ್ದುಗೊಳಿಸಬೇಕು. ರೈತರ ಮೇಲೆ ದಾಖಲಾಗಿರುವ ಎಲ್ಲಾ ಪ್ರಕರಣ ಹಿಂಪಡೆಯಬೇಕು. ಕಾರ್ಮಿಕರ ಕೆಲಸದ ಅವಧಿ 8ಗಂಟೆಗೆ ಸೀಮಿತಗೊಳಿಸಬೇಕು. ರಾತ್ರಿ ಪಾಳಿಯಲ್ಲಿ ಮಹಿಳೆಯರು ಕೆಲಸ ಮಾಡುವ ಕಾನೂನು ರದ್ದುಗೊಳಿಸಬೇಕು. ಕಾರ್ಮಿಕರ ವಿಮಾ ನಿಗಮದಿಂದ ಅಗತ್ಯ ವೈದ್ಯಕೀಯ ಸೌಲಭ್ಯ, ಸಹಾಯಧನ ಸಿಗಲು ಕ್ರಮ ಕೈಗೊಳ್ಳಬೇಕು ಎಂದು ಸರ್ಕಾರಕ್ಕೆ ಕೋರಿದರು.
ಮುಖಂಡರಾದ ಮಹೇಶ್ವರಿ, ಜಿ.ಸಿ.ಸುರೇಶ್ಬಾಬು, ಸಿ.ವೈ.ಶಿವರುದ್ರಪ್ಪ, ಟಿ.ಆರ್.ಉಮಾಪತಿ, ಜಯದೇವಮೂರ್ತಿ, ಸತ್ಯಕೀರ್ತಿ, ಬಿ.ಬಸವರಾಜಪ್ಪ, ಎನ್.ಸಿ.ಕುಮಾರಸ್ವಾಮಿ, ಜಾಫರ್ಶರೀಫ್, ಶಿವಲಿಂಗಪ್ಪ ಇತರರಿದ್ದರು.