ಬೆಳಗಾವಿ: ಮಹಾನಗರ ಪಾಲಿಕೆಯಿಂದ ಪರವಾನಗಿ ನವೀಕರಣ ಮಾಡಿಕೊಳ್ಳದೆ ಕಾನೂನು ಬಾಹಿರವಾಗಿ ಕಾರ್ಯನಿರ್ವಹಿಸುತ್ತಿದ್ದ ಆಯುರ್ವೇದ ಸಿದ್ಧ ಮತ್ತು ಯುನಾನಿ ಔಷಧಗಳ ತಯಾರು ಮಾಡುವ ಕಾರ್ಖಾನೆಯ ಮೇಲೆ ಗುರುವಾರ ಪಾಲಿಕೆ ಸದಸ್ಯರು, ಅಧಿಕಾರಿಗಳು ದಾಳಿ ನಡೆಸಿ ಬಿಸಿ ಮುಟ್ಟಿಸಿದ್ದಾರೆ.
ರಾಮತೀರ್ಥ ನಗರ ವ್ಯಾಪ್ತಿಯಲ್ಲಿ ಬರುವ ಕೆಐಡಿಬಿಯಲ್ಲಿರುವ ಹರ್ಬಲ್ ಆಯುರ್ವೇದ ಔಷಧ ತಯಾರು ಮಾಡುವ ಕಾರ್ಖಾನೆ ಸಿಬ್ಬಂದಿ ತ್ಯಾಜ್ಯವನ್ನು ಸಾರ್ವಜನಿಕ ಸ್ಥಳ, ರಸ್ತೆ ಬದಿಗಳಲ್ಲಿ ಹಾಕುತ್ತಿದ್ದರು. ಈ ಹಿನ್ನೆಲೆಯಲ್ಲಿ ಪಾಲಿಕೆಯ ಸದಸ್ಯ, ಆರೋಗ್ಯ ಅಧಿಕಾರಿ, ಪರಿಸರ ಮಾಲೀನ್ಯ ನಿಯಂತ್ರಣ ಅಧಿಕಾರಿಗಳು ದಾಳಿ ನಡೆಸಿದರು. ಈ ವೇಳೆ ಕಾರ್ಖಾನೆಯ ಆರಂಭ ಪರವಾನಗಿ ಪತ್ರ ನವೀಕರಣಗೊಂಡಿಲ್ಲ.
ಕಾನೂನು ಬಾಹಿರವಾಗಿ ಕಾರ್ಯನಿರ್ವಹಿಸುತ್ತಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ಈ ಹಿನ್ನೆಲೆ ಅಧಿಕಾರಿಗಳು ಕಾರ್ಖಾನೆ ಬಂದ್ ಮಾಡಿದರು. ಸಂಬಂಧಪಟ್ಟ ಎಲ್ಲ ದಾಖಲೆಗಳನ್ನು ಹಾಜರುಪಡಿಸಬೇಕು. ಪರವಾನಗಿ ನವೀಕರಣ ಮಾಡಿ ಕೊಂಡು ದಂಡ ಪಾವತಿಸಬೇಕು ಎಂದು ಸೂಚಿಸಿದರು.
ರಸ್ತೆಯ ಮೇಲೆ ತ್ಯಾಜ್ಯ ಹಾಕುತ್ತಿದ್ದ ಕುರಿತು ಪರಿಶೀಲಿಸಿ ಕೇಸ್ ಹಾಕಿ ದಂಡ ಹಾಕುವಂತೆ ಪಾಲಿಕೆ ಆರೋಗ್ಯ, ಪರಿಸರ ಮಾಲಿನ್ಯ ನಿಯಂತ್ರಣ ಅಧಿಕಾರಿಗಳಿಗೆ ಸೂಚಿಸಲಾಗಿತ್ತು. ಆದರೆ, ಪರಿಶೀಲನೆ ವೇಳೆ ಪರವಾನಗಿ ನವೀಕರಣ ಮಾಡಿಕೊಳ್ಳದಿರುವುದು ಬೆಳಕಿಗೆ ಬಂದಿದೆ. ಹಾಗಾಗಿ ಕಠಿಣ ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ ಎಂದು ಪಾಲಿಕೆ ಸದಸ್ಯ ಹನಮಂತ ಕೊಂಗಾಲ ತಿಳಿಸಿದ್ದಾರೆ.