ಬಸವಕಲ್ಯಾಣ: ಲೋಕಸಭೆ ಚುನಾವಣೆ ನಿಮಿತ್ತ ಮೇ ೭ರಂದು ನಡೆಯಲಿರುವ ಮತದಾನ ದಿನ ಎಲ್ಲರೂ ತಮ್ಮ ಹಕ್ಕು ಚಲಾಯಿಸಬೇಕು ಎಂದು ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ರಮೇಶ ಸುಲ್ಪಿ ಹೇಳಿದರು.
ಬೆಟಬಾಲಕುಂದಾ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗೌರ ಗ್ರಾಮದಲ್ಲಿ ಉದ್ಯೋಗ ಖಾತ್ರಿಯಡಿ ನಡೆದಿರುವ ಕಾಮಗಾರಿ ಸ್ಥಳದಲ್ಲಿ ಬುಧವಾರ ಏರ್ಪಡಿಸಿದ್ದ ಮತದಾನ ಜಾಗೃತಿ ಅಭಿಯಾನದಲ್ಲಿ ಮಾತನಾಡಿದ ಅವರು, ಯಾವ ಕಾರಣಕ್ಕೂ, ಎಷ್ಟೇ ಕೆಲಸ ಇದ್ದರೂ ಬಿಟ್ಟು ಸಂವಿಧಾನ ನೀಡಿದ ಮತದಾನದ ಹಕ್ಕು ಚಲಾಯಿಸಬೇಕು ಹೊರತು, ನನ್ನೊಂದು ಮತದಿಂದ ಏನಾಗುವುದಿದೆ ಎಂದು ನಿರ್ಲಕ್ಷ್ಯಿಸಬಾರದು ಎಂದು ತಿಳಿಹೇಳಿದರು.
ಮತದಾನ ಪವಿತ್ರವಾದ ಹಕ್ಕು. ಪ್ರಾಮಾಣಿಕ ಮತ್ತು ನಮ್ಮ ಸಮಸ್ಯೆಗಳಿಗೆ ಸ್ಪಂದಿಸುವಂಥ ಅಭ್ಯರ್ಥಿಗೆ ಮತ ಹಾಕಬೇಕು ಹೊರತು, ಆಮಿಷಗಳಿಗೆ ಒಳಗಾಗಿ ಮತದಾನ ಮಾರಿಕೊಳ್ಳಬಾರದು ಎಂದು ಕೋರಿದರು.
ಗ್ರಾಪಂ ಪಿಡಿಒ ವಿಷ್ಣುಕಾಂತ ರೆಡ್ಡಿ, ತಾಂತ್ರಿಕ ಸಂಯೋಜಕ ಅಮರನಾಥ ಪಾಟೀಲ್, ಐಇಸಿ ಸಂಯೋಜಕ ವೀರಾರೆಡ್ಡಿ, ಟಿಎ ಮಲ್ಲಿಕಾರ್ಜುನ ಜಾಧವ್, ಮಲ್ಲಿಕಾರ್ಜುನ, ರೇಷ್ಮಾ, ನಿಕಿತಾ ಇತರರಿದ್ದರು. ಬಳಿಕ ಗ್ರಾಮದ ಮತದಾನ ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲಿಸಲಾಯಿತು.