ಕಳಸ: ಆನ್ಲೈನ್ ಶಿಕ್ಷಣ ಕಲಿಕೆಗೆ ನನ್ನ ವಿರೋಧವಿದೆ ಎಂದು ಮೂಡಿಗೆರೆ ಶಾಸಕ ಎಂ.ಪಿ.ಕುಮಾರಸ್ವಾಮಿ ಹೇಳಿದರು.
ಕಳಸ ಪ್ರಥಮದರ್ಜೆ ಕಾಲೇಜಿನಲ್ಲಿ ಮಂಗಳವಾರ ಟ್ಯಾಬ್ ವಿತರಣೆ, ಸ್ಮಾರ್ಟ್ಕ್ಲಾಸ್ ರೂಂ ಉದ್ಘಾಟನೆ, ರೋಟರಿ ಕ್ಲಬ್ ಮತ್ತು ಕಾಗ್ನಿಜೆಂಟ್ ಕಂಪನಿಯಿಂದ ಕಂಪ್ಯೂಟರ್ ಕೊಡುಗೆ ಹಾಗೂ ಕಾಲೇಜಿನ ಕಾಂಕ್ರೀಟ್ ರಸ್ತೆ ಉದ್ಘಾಟಿಸಿ ಮಾತನಾಡಿದರು.
ಗ್ರಾಮೀಣ ಪ್ರದೇಶದಲ್ಲಿ ಇಂದಿಗೂ ವಿದ್ಯುತ್, ನೆಟ್ವರ್ಕ್ ಸಮಸ್ಯೆ ಇದೆ. ಇದರಿಂದ ಬಡ ವಿದ್ಯಾರ್ಥಿಗಳು ಆನ್ಲೈನ್ ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ಶಾಲಾ ಕಾಲೇಜುಗಳನ್ನು ತೆರೆದು ತರಗತಿ ನಡೆಸಲು ಶಿಕ್ಷಣ ಸಚಿವರಿಗೆ ಮನವಿ ಮಾಡಲಾಗಿದೆ. ಇಂದಿನ ಪರಿಸ್ಥಿತಿಯಲ್ಲಿ ಆನ್ಲೈನ್ ಕ್ಲಾಸ್ ಅನಿವಾರ್ಯವಾಗಿರುವುದರಿಂದ ವಿದ್ಯಾರ್ಥಿಗಳಿಗೆ ಸರ್ಕಾರ ಟ್ಯಾಬ್ ವಿತರಿಸಿದೆ. ವಿದ್ಯಾರ್ಥಿಗಳು ಇದನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.
ಕಳಸ ಗ್ರಾಪಂ ಅಧ್ಯಕ್ಷೆ ಸುಜಯಾ ಸದಾನಂದ ಮಾತನಾಡಿ, ಮನಸ್ಸಿನಷ್ಟೇ ವೇಗವಾಗಿ ಓಡುತ್ತಿರುವ ತಂತ್ರಜ್ಞಾನ ಕಲಿಕೆಗೆ ಸರ್ಕಾರ ಉಚಿತವಾಗಿ ಟ್ಯಾಬ್ ನೀಡುತ್ತದೆ. ಕರೊನಾದಿಂದ ಪಠ್ಯ ಚಟುವಟಿಕೆಗಳು ಸ್ಥಗಿತಗೊಂಡಿವೆ. ಮಕ್ಕಳು ಈ ನೂತನ ತಂತ್ರಜ್ಞಾನವನ್ನು ಬಳಸಿಕೊಂಡು ಕಲಿಕೆಗೆ ಮುಂದಾಗಬೇಕು ಎಂದು ಹೇಳಿದರು.