ಲಕ್ಷ್ಮೇಶ್ವರ: ತಾಲೂಕಿನ ಆದ್ರಳ್ಳಿ ಗ್ರಾಮದಲ್ಲಿ ಎರಡು ಶುದ್ಧ ಕುಡಿಯುವ ನೀರಿನ ಎರಡು ಘಟಕಗಳಿದ್ದರೂ ಗ್ರಾಮಸ್ಥರು ಬೋರ್ವೆಲ್ ನೀರನ್ನೇ ಸೇವಿಸಬೇಕಾದ ಪರಿಸ್ಥಿತಿ ಉಂಟಾಗಿದೆ. ಗ್ರಾಮದಲ್ಲಿ ಬೋವಿ ಓಣಿ, ನಾದಿಗಟ್ಟಿ ರಸ್ತೆ ಸೇರಿ 2 ಘಟಕಗಳಿವೆ. ಈ ಪೈಕಿ ನಾದಿಗಟ್ಟಿ ರಸ್ತೆಯಲ್ಲಿನ ಘಟಕ ಸಹ ವಾರದಿಂದ ದುರಸ್ತಿಯಲ್ಲಿದೆ. ಇನ್ನು 2017ರಲ್ಲಿ ಬೋವಿ ಓಣಿಯಲ್ಲಿ 10 ಲಕ್ಷ ರೂ. ವೆಚ್ಚದಲ್ಲಿ ಘಟಕ ನಿರ್ವಿುಸಲಾಗಿತ್ತು. ಆದರೆ, ಈ ಘಟಕ ಈವರೆಗೂ ಕಾರ್ಯಾರಂಭವೇ ಆಗಿಲ್ಲ.
ಹೀಗಾಗಿ ಗ್ರಾಮಸ್ಥರಿಗೆ ಆದ್ರಳ್ಳಿ ಗ್ರಾಪಂನವರು ಬೋರ್ವೆಲ್ನಿಂದ ನಲ್ಲಿ ಮೂಲಕ ಮನೆ-ಮನೆಗೆ ನೀರು ಪೂರೈಸುತ್ತಿದ್ದಾರೆ.
10 ಸಾವಿರ ಜನಸಂಖ್ಯೆಯ ಈ ಗ್ರಾಮದಲ್ಲಿ ಬಹುತೇಕ ಲಮಾಣಿ, ಭೋವಿ ಸೇರಿ ಹಿಂದುಳಿದ ವರ್ಗದ ಜನರು ವಾಸವಾಗಿದ್ದಾರೆ. 2014ರಲ್ಲಿ ಗ್ರಾಮದ ದೇವಿಹಾಳ ರಸ್ತೆಗೆ ಹೊಂದಿಕೊಂಡು ನಿರ್ವಿುಸಿದ್ದ ಶುದ್ಧ ಕುಡಿಯುವ ನೀರಿನ ಘಟಕ 2 ವರ್ಷಗಳಾದರೂ ಕಾರ್ಯ ನಿರ್ವಹಿಸಲೇ ಇಲ್ಲ. 2016ರಲ್ಲಿ ಬಿರುಗಾಳಿಗೆ ಘಟಕದ ಮೇಲ್ಛಾವಣಿ ಹಾರಿ ಹೋಗಿತ್ತು. ಉಳಿದಿದ್ದ ಯಂತ್ರೋಪಕರಣಗಳು ಎಲ್ಲಿ ಹೋದವೋ ಗೊತ್ತಿಲ್ಲ.
ಶುದ್ಧ ಕುಡಿಯುವ ನೀರಿನ ಘಟಕ ನಿರ್ವಣಕ್ಕೆ ಬೋವಿ ಓಣಿ ಸೂಕ್ತವಲ್ಲ ಎಂದು ಹೇಳಿದರೂ ಕ್ಯಾರೇ ಎನ್ನದೆ ತರಾತುರಿಯಲ್ಲಿ ನಿರ್ವಿುಸಿದರು. ನಂತರ ಇಲ್ಲಸಲ್ಲದ ಕಾರಣಗಳನ್ನು ಹೇಳುತ್ತ 3 ವರ್ಷ ಕಳೆದಿದ್ದಾರೆ. ಇನ್ನಾದರೂ ಈ ಘಟಕದ ಸುತ್ತಲಿನ ಪ್ರದೇಶ ಸ್ವಚ್ಛತೆ, ರಸ್ತೆ, ವಿದ್ಯುದೀಪ ಸೌಲಭ್ಯ ಒದಗಿಸಿ ಕಾರ್ಯಾರಂಭ ಮಾಡಬೇಕು. ಅದರಿಂದ ಹತ್ತಿರದ ಶಾಲೆ ಮಕ್ಕಳು, ಹಿಂದುಳಿದ ವರ್ಗದ ಜನರಿಗೆ ಶುದ್ಧ ನೀರು ದೊರೆಯುತ್ತದೆ.
| ಮಲ್ಲೇಶ ವಡ್ಡರ, ಗ್ರಾಮಸ್ಥ
ಇತ್ತೀಚೆಗೆ ಕರ್ತವ್ಯಕ್ಕೆ ಹಾಜರಾಗಿದ್ದೇನೆ. ಗ್ರಾಮಕ್ಕೆ ತೆರಳಿ ಗ್ರಾಪಂ ಅಭಿವೃದ್ಧಿ ಅಧಿಕಾರಿ, ಗ್ರಾಮೀಣ ಕುಡಿಯುವ ನೀರು ಸರಬರಾಜು ಇಲಾಖೆ ಅಧಿಕಾರಿಗಳೊಂದಿಗೆ ರ್ಚಚಿಸುವೆ. ಕೂಡಲೇ ಶುದ್ಧ ಕುಡಿಯುವ ನೀರಿನ ಘಟಕ ಪ್ರಾರಂಭಕ್ಕೆ ಕ್ರಮ ಕೈಗೊಳ್ಳಲಾಗುವುದು.
| ಆರ್.ವೈ. ಗುರಿಕಾರ, ತಾಪಂ ಕಾರ್ಯನಿರ್ವಾಹಕ ಅಧಿಕಾರಿ