ಬೆಳಗಾವಿ: ರಾತ್ರಿ 10ರ ನಂತರ ಟ್ಯಾಂಕರ್ ವಾಹನ ಚಾಲನೆ ಮಾಡದಂತೆ ಕಂಪನಿಯಿಂದ ಕಟ್ಟುನಿಟ್ಟಿನ ಸೂಚನೆ ನೀಡಬೇಕು. ಆದೇಶ ಉಲ್ಲಂಘಿಸುವ ಚಾಲಕರಿಗೆ ಕಂಪನಿ ನಿಯಮಾನುಸಾರ ದಂಡ ಹಾಗೂ ಇನ್ನಿತರ ಕ್ರಮ ಕೈಗೊಳ್ಳಬೇಕು ಎಂದು ಉಪವಿಭಾಗಾಧಿಕಾರಿ ರವೀಂದ್ರ ಕರಲಿಂಗಣ್ಣವರ ಹೇಳಿದರು.
ಬೆಳಗಾವಿಯ ಹಿಂಡಾಲ್ಕೋ ಇಂಡಸ್ಟ್ರಿ ಲಿಮಿಟೆಡ್ ಕಂಪನಿಯ ಸಭಾ ಭವನದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಅಪಾಯಕಾರಿ ರಾಸಾಯನಿಕ (ಬೆಂಜಿನ್) ಸಾಗಣೆ ಅಪಘಾತ ನಿರ್ವಹಣೆ ಕುರಿತು ಕಾರ್ಯಾಗಾರದಲ್ಲಿ ಮಾತನಾಡಿದರು. ಕಂಪನಿಯಿಂದ ಜಿಪಿಎಸ್ ಅಳವಡಿಸಿದ ಟ್ಯಾಂಕರ್ಗಳನ್ನು 24 ಗಂಟೆಗಳ ಕಾಲ ಟ್ರ್ಯಾಕ್ ಮಾಡಿ ಅವುಗಳ ಡೇಟಾ ಸಂಗ್ರಹಿಸಬೇಕು. ತಮ್ಮ ಕಂಪನಿಗಳ ವ್ಯವಹಾರಗಳಲ್ಲಿ ಸುರಕ್ಷತೆಗೆ ಮೊದಲ ಆದ್ಯತೆ ನೀಡಬೇಕು. ಯಾವುದೇ ಅಪಘಾತಗಳು ಸಂಭವಿಸದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಟ್ಯಾಂಕರ್ ಲೀಕ್ ಹಾಗೂ ವಾಹನಗಳ ನಿರಂತರ ಪರಿಶೀಲನೆ ಮಾಡಿ ರಸ್ತೆಗೆ ಬಿಡಬೇಕು ಎಂದು ಸಲಹೆ ನೀಡಿದರು. ಹಿಂಡಾಲ್ಕೋ ಕಾರ್ಖಾನೆಗಳ ಉಪ ನಿರ್ದೇಶಕ ವೆಂಕಟೇಶ ರಾಠೋಡ ಹಾಗೂ ಪರೇಶ್ ಪ್ರಜಾಪತಿ ಮಾತನಾಡಿದರು. ಜಿಲ್ಲಾ ಪರಿಸರ ಅಧಿಕಾರಿ ಜಗದೀಶ, ಜಿಲ್ಲಾ ಅಗ್ನಿಶಾಮಕ ದಳದ ಅಧಿಕಾರಿ ಶಶಿಧರ ನಿಲಗಾರ, ರಸ್ತೆ ಸಾರಿಗೆ ಅಧಿಕಾರಿ ಎಸ್.ಬಿ ಮಗದುಮ್ಮ, ಎನ್.ಡಿ.ಆರ್.ಎಫ್ ಕಮಾಂಡೆಂಟ್ ಅರವಿಂದ, ಜಿಲ್ಲಾಮಟ್ಟದ ವಿವಿಧ ಅಧಿಕಾರಿಗಳು ಹಾಗೂ ಸಿಬ್ಬಂದಿ ಭಾಗವಹಿಸಿದ್ದರು.