ನಂಜನಗೂಡು: ತಾಲೂಕಿನ ಹೆಡತಲೆ ಗ್ರಾಮದಲ್ಲಿ ಆದಿಶಕ್ತಿ ಭಂಗಿ ಮಾರಮ್ಮ ಜಾತ್ರಾ ಮಹೋತ್ಸವ ಅಂಗವಾಗಿ ಶುಕ್ರವಾರ ಉತ್ಸವಮೂರ್ತಿಯ ವಿಜೃಂಭಣೆಯ ರಥೋತ್ಸವ ಜರುಗಿತು.
ಕಳೆದ ಒಂದು ವಾರದಿಂದ ನಡೆಯುತ್ತಿರುವ ಜಾತ್ರಾ ಮಹೋತ್ಸವ ವಿವಿಧ ಧಾರ್ಮಿಕ ಪೂಜಾ ಕೈಂಕರ್ಯಗಳು ಸಾಂಗವಾಗಿ ನೆರವೇರಿದ್ದು ಶುಕ್ರವಾರ ರಥೋತ್ಸವ ಅಂಗವಾಗಿ ದೇಗುಲದಲ್ಲಿ ವಿಶೇಷ ಪೂಜೆ, ಅಲಂಕಾರ ನಡೆಯಿತು.
ವಿವಿಧ ಬಗೆಯ ಅಲಂಕಾರಿಕ ಪುಷ್ಪದಿಂದ ಸಿಂಗಾರಗೊಂಡಿದ್ದ ರಥದಲ್ಲಿ ಭಂಗಿ ಮಾರಮ್ಮ ಉತ್ಸವಮೂರ್ತಿಯನ್ನು ಪ್ರತಿಷ್ಠಾಪಿಸಿ ರಥಕ್ಕೆ ಪೂಜೆ ಸಲ್ಲಿಸುವ ಮೂಲಕ ವಿಧ್ಯುಕ್ತ ಚಾಲನೆ ನೀಡಲಾಯಿತು. ರಥವನ್ನು ಭಕ್ತಿ ಭಾವದಿಂದ ಎಳೆದ ಗ್ರಾಮಸ್ಥರು ಹಾಗೂ ಭಕ್ತರು ಜೈಕಾರ ಹಾಕುತ್ತಾ ರಥೋತ್ಸವದಲ್ಲಿ ಪಾಲ್ಗೊಂಡರು. ಗ್ರಾಮದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿದ ರಥ ಯಾವುದೇ ಅಡೆತಡೆಯಿಲ್ಲದೆ ಸ್ವಸ್ಥಾನಕ್ಕೆ ಮರಳಿತು.
ಭಕ್ತರು ಹಣ್ಣು ಧವನವನ್ನು ಎಸೆದು ಭಕ್ತಿ ಪರಾಕಾಷ್ಠೆ ಮೆರೆದರು. ಶಾಸಕ ಬಿ. ಹರ್ಷವರ್ಧನ್ ರಥೋತ್ಸವದಲ್ಲಿ ಪಾಲ್ಗೊಂಡಿದ್ದರು.