ಮಂಗಳೂರು: ಮಂಗಳೂರು ಬಂದರಿಗೆ ಕುವೈತ್ನಿಂದ ಬಂದಿದ್ದ ಮೆಡಿಕಲ್ ಆಕ್ಸಿಜನ್ನ ಖಾಲಿ ಟ್ಯಾಂಕರ್ಗಳನ್ನು ವಾಯುಪಡೆಯ ಸರಕು ವಿಮಾನದ ಮೂಲಕ ಭಾನುವಾರ ಮುಂಬೈಗೆ ಕಳುಹಿಸಲಾಗಿದೆ.
ಕೆಲ ದಿನಗಳ ಹಿಂದೆಯಷ್ಟೇ ಐಎನ್ಎಸ್ ಶಾರ್ದೂಲ್ ನೌಕಾಪಡೆ ನೌಕೆಯ ಮೂಲಕ ಕುವೈತ್ನಿಂದ 7 ಕಂಟೈನರುಗಳಲ್ಲಿ ಆಕ್ಸಿಜನ್ ಮಂಗಳೂರಿಗೆ ಬಂದಿತ್ತು. ಅದರಿಂದ ಆಕ್ಸಿಜನ್ ಖಾಲಿ ಮಾಡಿದ್ದು ಕಂಟೈನರುಗಳಲ್ಲಿ ನಾಲ್ಕನ್ನು ಭಾನುವಾರ ಮಂಗಳೂರಿಗೆ ಬಂದಿದ್ದ ವಾಯುಪಡೆ ವಿಮಾನ ಮೂಲಕ ಮುಂಬೈಗೆ ಕಳುಹಿಸಲಾಗಿದೆ.
ಮೇ 13ರಂದು ಇದೇ ರೀತಿ ಖಾಲಿ ಕಂಟೈನರ್ಗಳನ್ನು ಚಂಡೀಗಢಕ್ಕೆ ಕಳುಹಿಸಲಾಗಿತ್ತು. ಈವರೆಗೆ ಕುವೈತ್ನಿಂದ ಐದು ಹಡಗುಗಳಲ್ಲಿ ಮಂಗಳೂರಿಗೆ ಆಕ್ಸಿಜನ್ ಬಂದಿವೆ. ಮಂಗಳೂರಿನಲ್ಲಿ ಆಕ್ಸಿಜನ್ ಕಂಟೈನರ್ಗಳನ್ನು ಗಣೇಶ್ ಶಿಪ್ಪಿಂಗ್ನವರು ಉಚಿತವಾಗಿ ಸಾಗಾಟ ಮಾಡುತ್ತಿದ್ದು, ಟ್ರೈಲರ್ ಗಾಡಿಯ ಮೂಲಕ ಖಾಲಿ ಕಂಟೈನರುಗಳನ್ನು ವಾಯುಪಡೆಯ ಸರಕು ಸಾಗಾಟ ವಿಮಾನಕ್ಕೆ ಲೋಡ್ ಮಾಡಲಾಗಿದೆ. ಈ ಆಕ್ಸಿಜನ್ ಸಾಗಾಟ ವ್ಯವಸ್ಥೆಯನ್ನು ಕೇಂದ್ರ ಸರ್ಕಾರದ ವಿದೇಶಾಂಗ ಸಚಿವಾಲಯ ಹಾಗೂ ರಕ್ಷಣಾ ಸಚಿವಾಲಯದ ನಿರ್ದೇಶನಗಳ ಅನ್ವಯ ಇಂಡಿಯನ್ ಆಯಿಲ್ ಕಾರ್ಪೊರೇಷನ್ ನೋಡಿಕೊಳ್ಳುತ್ತಿದೆ.