ಚನ್ನರಾಯಪಟ್ಟಣ: ತಾಲೂಕಿನ ದೊಡ್ಡೇರಿ ಕಾವಲಿನ (ಬ್ಲಾಕ್-1) ಹೊರ ವಲಯದ ತೋಟವೊಂದರಲ್ಲಿ ಬೆಂಕಿ ಕಾಣಿಸಿಕೊಂಡ ಪರಿಣಾಮ ಕೊಬ್ಬರಿ ಶೆಡ್ ಹಾಗೂ ರಾಗಿ ಹುಲ್ಲಿನ ಮೆದೆ ಸಂಪೂರ್ಣ ಭಸ್ಮವಾಗಿದೆ.
ಗ್ರಾಮದ ನಿವಾಸಿ ನಿಂಗೇಗೌಡ ಎಂಬುವರ ತೋಟದಲ್ಲಿ ಭಾನುವಾರ ರಾತ್ರಿ 11.30 ರ ಸುಮಾರಿನಲ್ಲಿ ಕೊಬ್ಬರಿ ಶೆಡ್ನಲ್ಲಿ ದಿಢೀರ್ ಬೆಂಕಿ ಕಾಣಿಸಿಕೊಂಡಿದೆ. ಇದನ್ನು ಕಂಡ ಮನೆಯವರು ಕೂಗಾಡಿದ್ದು, ಅಕ್ಕಪಕ್ಕದವರು ಹಾಗೂ ಗ್ರಾಮಸ್ಥರು ಬಂದಿದ್ದಾರೆ. ಬಳಿಕ ಬಿಂದಿಗೆಯಲ್ಲಿ ನೀರು ಹಾಕಿ ಹಸಿ ತೆಂಗಿನ ಗರಿ ಹಾಗೂ ಸೊಪ್ಪಿನ ಗಿಡಗಳಿಂದ ಬೆಂಕಿ ನಂದಿಸಲು ಪ್ರಯತ್ನಿಸಿದರಾದರೂ ಶೆಡ್ ಹಾಗೂ ರಾಗಿ ಹುಲ್ಲಿನ ಮೆದೆ ಹೊತ್ತಿ ಉರಿದಿದೆ.
ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಸತತ ಮೂರು ಗಂಟೆ ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸಿದ್ದಾರೆ. ಆ ಮೂಲಕ ಹೆಚ್ಚಿನ ಅನಾಹುತ ತಪ್ಪಿಸಿದ್ದಾರೆ. ಶೆಡ್ನಲ್ಲಿದ್ದ 15,000 ಕೊಬ್ಬರಿ, 5 ರಿಂದ 7 ಸಾವಿರ ಹಸಿ ತೆಂಗಿನಕಾಯಿ ಹಾಗೂ ಶೆಡ್ನ ಮೇಲ್ಛಾವಣಿ, ಮೂರು ಟ್ರಾೃಕ್ಟರ್ನಷ್ಟು ರಾಗಿ ಹುಲ್ಲು ಸುಟ್ಟು ಕರಕಲಾಗಿದೆ.
ಸೋಮವಾರ ಬೆಳಗ್ಗೆ ಹಿರೀಸಾವೆ ಪೊಲೀಸರು ಹಾಗೂ ಗ್ರಾಮ ಪಂಚಾಯಿತಿ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಮಾಹಿತಿ ಪಡೆದರು. ಹಿರೀಸಾವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.