ಕುಂದಗೋಳ: ಪಟ್ಟಣ ಹಾಗೂ ಸುತ್ತಲಿನ ಪ್ರದೇಶಗಳಲ್ಲಿ ಶನಿವಾರ ಸಂಜೆ ಸುಮಾರು 30 ನಿಮಿಷ ಆಲಿಕಲ್ಲು ಮಳೆ ಸುರಿಯಿತು. ಇದರಿಂದ ರೈತರು ಕಟಾವಿಗೆ ಬಂದ ಬೆಳೆಗಳ ರಕ್ಷಣೆಗೆ ಪರದಾಡುವಂತಾಯಿತು. ಕರೊನಾ ತಡೆಗಾಗಿ ಲಾಕ್ಡೌನ್ ಘೊಷಣೆ ಮಾಡಿದಾಗಿನಿಂದ ಹತ್ತಿ, ಜೋಳ, ಕುಸುಬಿ, ಗೋಧಿ ಮತ್ತಿತರ ಬೆಳೆಗಳು ಕಟಾವು ಮಾಡಬೇಕಾಗಿದೆ. ಕಟಾವು ಮಾಡಿರುವ ರೈತರು ಗೋಧಿ, ಕಡಲೆ ಹೊಟ್ಟನ್ನು ರಾಶಿ ಮಾಡಿಟ್ಟಿದ್ದಾರೆ. ಆದರೆ, ಸೊಪ್ಪಿ, ಹೊಟ್ಟಿನ ಬಣವೆಗಳನ್ನು ಒಟ್ಟಲಿಕ್ಕೆ ಆಗಿಲ್ಲ.
ಇಂಥದ್ದರಲ್ಲಿ ಶನಿವಾರ ಸುರಿದ ಮಳೆಯಿಂದ ಹೊಟ್ಟು ರಕ್ಷಣೆಗಾಗಿ ತಾಡಪತ್ರಿ ಹಾಕಲು ಹರಸಾಹಸ ಮಾಡಿದರು. ಪಟ್ಟಣದ ಅಂಬೇಡ್ಕರ್ ನಗರದಲ್ಲಿ ಗಟಾರ್ ತುಂಬಿ ನೀರು ಮುಂದಕ್ಕೆ ಹರಿಯದೇ ಮನೆಗೆ ನುಗ್ಗಿತು. ಇದರಿಂದ ನಿವಾಸಿಗಳು ತೊಂದರೆ ಅನುಭವಿಸಿದರು.
ತಂಪೆರೆದ ಮಳೆ: ಹುಬ್ಬಳ್ಳಿ: ಶನಿವಾರ ಸಂಜೆ ನಗರ ಮತ್ತು ಗ್ರಾಮಾಂತರದ ಕೆಲವು ಕಡೆ ಅರ್ಧ ಗಂಟೆಗಿಂತ ಹೆಚ್ಚು ಕಾಲ ಮಳೆ ಸುರಿಯಿತು. ಬೆಳಗ್ಗೆಯಿಂದ ಪ್ರಖರ ಬಿಸಿಲು ಇತ್ತು. ಸಕೆ ಕಾಡುತ್ತಿತ್ತು. ಸಂಜೆ ಸುರಿದ ಮಳೆ ವಾತಾವರಣವನ್ನು ತಂಪಾಗಿಸಿತು. ಭಾರತ ಸ್ತಬ್ಧತಾ ಆದೇಶ ಇರುವುದರಿಂದ ಮಾರುಕಟ್ಟೆಗಳು ಖಾಲಿ ಆಗಿದ್ದವು. ಹೆಚ್ಚಿನ ಜನ ಮನೆಯಲ್ಲೇ ಇದ್ದುದರಿಂದ ಮಳೆಯಿಂದ ತೊಂದರೆಯೇನೂ ಆಗಲಿಲ್ಲ. ಆದರೆ, ಮಾವು ಮತ್ತಿತರ ಫಸಲಿಗೆ ಹಾನಿಯಾಗುವ ಸಾಧ್ಯತೆ ಇದೆ.