ಮುಂಡರಗಿ: ತಾಲೂಕಿನ ಬೆಣ್ಣಿಹಳ್ಳಿ ಗ್ರಾಮದಲ್ಲಿ ಹೆದ್ದಾರಿ ಬದಿಯ ಮುಖ್ಯಚರಂಡಿ ಕಾಮಗಾರಿ ಅರ್ಧಕ್ಕೆ ನಿಂತು ಹಲವು ತಿಂಗಳು ಕಳೆದಿದೆ. ಇದರಿಂದ ಗಲೀಜು ನೀರು ಅಲ್ಲಲ್ಲಿ ನಿಂತು ಹಳೇ ಚರಂಡಿಗೆ ಸೇರಿ ದುರ್ನಾತ ಬೀರುತ್ತಿದ್ದು, ಗ್ರಾಮಸ್ಥರಿಗೆ ಕಿರಿಕಿರಿಯಾಗಿದೆ.
ಮುಂಡರಗಿಯಿಂದ ಹರಪನಹಳ್ಳಿವರೆಗೆ ಹೆದ್ದಾರಿ ಕಾಮಗಾರಿ ಕೈಗೊಳ್ಳಲಾಗಿದೆ. ಹೆದ್ದಾರಿ ಬದಿಯ ಗ್ರಾಮದ ಓಣಿಗಳ ಗಲೀಜು ನೀರು ಮುಖ್ಯಚರಂಡಿ ಮೂಲಕ ಊರ ಮುಂದೆ ಬಂದು ನಿಲ್ಲುತ್ತದೆ. ಅಲ್ಲಿಂದ ಗಲೀಜು ನೀರು ಬೇರೆ ಮಾರ್ಗದ ಮೂಲಕ ಹಳೇ ಚರಂಡಿಗೆ ಸೇರಿ ಊರ ಹೊರಗಡೆ ಹೋಗುತ್ತದೆ. ಈ ಮಧ್ಯೆದಲ್ಲಿ ಹರಿಯುವ ಗಲೀಜು ನೀರಿನಿಂದ ದುರ್ನಾತ ಬರುತ್ತಿದೆ. ಚರಂಡಿ ಕಾಮಗಾರಿ ಪೂರ್ಣಗೊಳಿಸಿ, ಅಲ್ಲಿಂದ ನೇರವಾಗಿ ಹಳ್ಳಕ್ಕೆ ಸಂಪರ್ಕ ಕಲ್ಪಿಸಬೇಕು ಎಂಬುದು ಸ್ಥಳೀಯರ ಆಗ್ರಹವಾಗಿದೆ.
ಅರ್ಧಕ್ಕೆ ನಿಂತ ಚರಂಡಿ ಕಾಮಗಾರಿ ಪೂರ್ಣಗೊಳಿಸಬೇಕು. ಮುಖ್ಯಚರಂಡಿ ಕಾಮಗಾರಿಯನ್ನು ಊರ ಹೊರಗಿನವರೆಗೂ ಕೈಗೊಳ್ಳಬೇಕು. ಗಲೀಜು ನೀರು ಗ್ರಾಮದ ಮಧ್ಯೆ ನಿಲ್ಲದಂತೆ ಅಧಿಕಾರಿಗಳು ಕ್ರಮ ವಹಿಸಬೇಕು ಎಂದು ಗ್ರಾಮಸ್ಥರಾದ ಸುರೇಶ ಅಡರಕಟ್ಟಿ, ಶಂಕರ ಬೆಟಗೇರಿ, ಬಸವರಾಜ ಡಂಬಳ, ಜಗದೀಶ ಅಡರಕಟ್ಟಿ, ಶಂಕ್ರಪ್ಪ ಹೆಬ್ಬಾಳ ಮತ್ತಿತರರು ಒತ್ತಾಯಿಸಿದ್ದಾರೆ.
ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಲಾಗುವುದು. ನಂತರ ಸ್ಥಳೀಯ ಅಧಿಕಾರಿಗಳೊಂದಿಗೆ ರ್ಚಚಿಸಿ ಸಮಸ್ಯೆ ಬಗೆಹರಿಸಲಾಗುವುದು.
| ವಿಶ್ವನಾಥ ಅಂಗಡಿ, ಕೆಆರ್ಡಿಸಿಎಲ್, ಇಇ, ಹೊಸಪೇಟೆ