ಅಂಕೋಲಾ: ಅರಣ್ಯ ಅತಿಕ್ರಮಣ ಸಕ್ರಮಕ್ಕೆ ಆಗ್ರಹಿಸಿ ಜಿಲ್ಲಾ ಅರಣ್ಯಭೂಮಿ ಹಕ್ಕು ಹೋರಾಟಗಾರರ ವೇದಿಕೆಯಿಂದ ಶನಿವಾರ ಪಟ್ಟಣದಲ್ಲಿ ಬೃಹತ್ ಪ್ರತಿಭಟನಾ ರ್ಯಾಲಿ ನಡೆಸಲಾಯಿತು.
ವೇದಿಕೆ ಜಿಲ್ಲಾಧ್ಯಕ್ಷ ಎ. ರವೀಂದ್ರ ನಾಯ್ಕ ಮಾತನಾಡಿ, ಅತಿಕ್ರಮಣದಾರರು ಈ ಹಿಂದೆ ಅರ್ಜಿ ಸಲ್ಲಿಸಿದ್ದರು. ಆದರೆ, ಅರ್ಜಿಯನ್ನು ತಿರಸ್ಕರಿಸಲಾಗಿತ್ತು. ಇದನ್ನು ಖಂಡಿಸಿ ಹೈಕೋರ್ಟ್ ಮೊರೆ ಹೋಗಿ ಕಾನೂನು ಹೋರಾಟ ಮಾಡಲಾಯಿತು. 30 ವರ್ಷಗಳಿಂದ ಅತಿಕ್ರಮಣದಾರರ ಪರವಾಗಿ ಹೋರಾಟ ಮಾಡುತ್ತಲೆ ಬಂದಿದ್ದೇನೆ. ಪ್ರತಿ ಕುಟುಂಬವೂ ನನ್ನ ಕುಟುಂಬ ಇದ್ದಂತೆ. ಈ ಪ್ರತಿಭಟನೆಯಲ್ಲಿ ನಾವು ಮನವಿ ಸಲ್ಲಿಸದೆ ಅತಿಕ್ರಮಣದಾರರೇ ತಹಸೀಲ್ದಾರ್ ಕಚೇರಿ ಮೂಲಕ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಿದ್ದಾರೆ ಎಂದರು.
ಜಿಲ್ಲಾ ಪ್ರಧಾನ ಸಂಚಾಲಕ ಜಿ.ಎಂ. ಶೆಟ್ಟಿ ಮಾತನಾಡಿದರು. ನಂತರ ತಹಸೀಲ್ದಾರ್ ಕಚೇರಿಗೆ ಆಗಮಿಸಿ ಸಕ್ರಮಕ್ಕೆ ಆಗ್ರಹಿಸಿ ಘೊಷಣೆ ಕೂಗಿದರು. ತಾಪಂ ಅಧ್ಯಕ್ಷೆ ಸುಜಾತಾ ಗಾಂವಕರ, ಜಿ.ಪ. ಮಾಜಿ ಅಧ್ಯಕ್ಷ ರಮಾನಂದ ನಾಯಕ ಮಾತನಾಡಿದರು. ವೇದಿಕೆಯ ತಾಲೂಕಾಧ್ಯಕ್ಷ ರಮಾನಂದ ನಾಯಕ ಅಚವೆ, ಪ್ರಮುಖರಾದ ಬಾಲಚಂದ್ರ ಶೆಟ್ಟಿ, ಪಾಂಡುರಂಗ ಗೌಡ, ರಾಜೇಶ ಮಿತ್ರಾ ನಾಯ್ಕ, ದೇವರಾಯ ನಾಯಕ, ಉಮೇಶ ಎನ್. ನಾಯ್ಕ, ಬಿ.ಡಿ. ನಾಯ್ಕ, ಪ್ರದೀಪ ವಾಸರೆ, ವಿನೋದ ನಾಯ್ಕ, ಅಶೋಕ ಶೇಡಗೇರಿ, ಪರಮೇಶ್ವರ ಗೌಡ ಸೇರಿ 2 ಸಾವಿರಕ್ಕೂ ಅಧಿಕ ಅತಿಕ್ರಮಣದಾರರು ಈ ಹೋರಾಟದಲ್ಲಿ ಪಾಲ್ಗೊಂಡಿದ್ದರು. ತಹಸೀಲ್ದಾರ್ ಕಚೇರಿಯಲ್ಲಿ ಅತಿಕ್ರಮಣದಾರರಿಂದ ಅರ್ಜಿ ಸ್ವೀಕರಿಸಲು 8 ಕೇಂದ್ರ ತೆರೆಯಲಾಗಿತ್ತು.