ವಿಜಯವಾಣಿ ವಿಶೇಷ ಕಲಬುರಗಿ
ಉದನೂರ ರಸ್ತೆಯ ಜಯತೀರ್ಥ ಕಲ್ಯಾಣ ಮಂಟಪದ ಎದುರಿನಿಂದ ರಿಂಗ್ ರಸ್ತೆವರೆಗಿನ ಬೃಹತ್ ಚರಂಡಿ ನಿರ್ಮಿಸಿ ಒಂದು ವರ್ಷ ಗತಿಸಿದೆ. ಜನವಸತಿ ಪ್ರದೇಶದಲ್ಲಿ ನಾಲೆಗಳಿಗೆ ಕಡ್ಡಾಯವಾಗಿ ಮೇಲ್ಛ್ಛಾವಣಿ ಹಾಕಬೇಕು ಎಂಬ ನಿಯಮವಿದೆ. ಆದರೆ ಇಲ್ಲಿ ಮೇಲ್ಛಾವಣಿ ಹಾಕದೇ ಹಾಗೆಯೇ ಬಿಡಲಾಗಿದೆ.
ಜನಸವತಿ ಪ್ರದೇಶ ಇದಾಗಿದ್ದರಿಂದ ಚಿಕ್ಕ ಮಕ್ಕಳು ಆಟವಾಡುತ್ತಾರೆ. ಪಾಲಕರಿಗೆ ಮಕ್ಕಳನ್ನು ಕಾಯುವುದೇ ಒಂದು ಕೆಲಸವಾದಂತಿದೆ. ನಾಲೆಗೆ ಅಂಟಿಕೊಂಡೆ ಮನೆಗಳಿವೆ. ಸಂಬಂಧಿತ ಇಲಾಖೆ ಅಧಿಕಾರಿಗಳು ಮೇಲ್ಛಾವಣಿ ಅಳವಡಿಸಲು ಸೂಕ್ತ ಕ್ರಮ ಕೈಗೊಳ್ಳುವುದು ಅಗತ್ಯವಾಗಿದೆ.
ದನ ಕರುಗಳು ನಾಲೆಯಲ್ಲಿ ಬಿದ್ದ ಉದಾಹರಣೆಗಳಿವೆ. ಮಕ್ಕಳು ನಾಲೆಯಲ್ಲಿ ಬಿದ್ದರೆ ಗತಿ ಏನು?. ಅಲ್ಲದೆ ನಾಲೆಯಲ್ಲಿ ಗಿಡಗಂಟಿಗಳು ಬೆಳೆದು ವಿಷ ಜಂತುಗಳು ಹೆಚ್ಚಾಗಿವೆ. ಮನೆಗಳಲ್ಲಿ ವಿಷ ಜಂತುಗಳು ಬರುತ್ತಿವೆ ಎಂಬುದು ಬಡಾವಣೆ ನಿವಾಸಿಗಳ ದೂರಾಗಿದೆ.
ಬೃಹತ್ ನಾಲೆ ಇದಾಗಿದ್ದು ಮೆಲ್ಛಾವಣಿ ಹಾಕದಿದ್ದರೆ ಅಪಾಯಕ್ಕೆ ಆಹ್ವಾನಿಸದಂತಾಗುತ್ತದೆ. ಅರ್ಧದಷ್ಟು ಭಾಗ ಮೇಲ್ಛ್ಛಾವಣಿ ಹಾಕಿ ಉಳಿದಿದ್ದು ಹಾಗೆ ಬಿಟ್ಟಿದ್ದರಿಂದ ಸಮಸ್ಯೆಯಾಗುತ್ತಿದೆ. ದೊಡ್ಡದಾದ ನಾಲೆ ಮುಚ್ಚದಿರುವುದು ಆತಂಕಕ್ಕೆ ಕಾರಣವಾಗಿದೆ.
ಬೃಹತ್ ಚರಂಡಿ ನಿರ್ಮಿಸಿ ಮುಚ್ಚದಿರುವುದರಿಂದ ಗಬ್ಬು ನಾತ ಬೀರುತ್ತಿದೆ. ಅಲ್ಲದೆ ಜನವಸತಿ ಪ್ರದೇಶವಾಗಿದ್ದರಿಂದ ಮಕ್ಕಳು ನಾಲೆಯಲ್ಲಿ ಬೀಳುವ ಸಂಭವ ಇರುತ್ತದೆ. ಅವಘಡ ಸಂಭವಿಸುವ ಮುನ್ನ ಸಂಬಂಧಿತ ಇಲಾಖೆ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕು.
| ರವಿ ಲಾತೂರಕರ್, ಬಡಾವಣೆ ಮುಖಂಡ
ಚರಂಡಿ ಮೇಲ್ಛಾವಣಿ ಹಾಕುವ ಮೂಲಕ ಈ ಪ್ರದೇಶದ ನಿವಾಸಿಗಳ ಸಮಸ್ಯೆಗೆ ಸ್ಪಂದಿಸಬೇಕು. ನಾಲೆ ಪಕ್ಕದಲ್ಲಿಯೇ ಮನೆಗಳು ಕಟ್ಟಿಕೊಂಡಿದ್ದೇವೆ. ಪ್ರತಿ ದಿನ ದುರ್ನಾತ ತಾಳಲಾಗುತ್ತಿಲ್ಲ. ಅಲ್ಲದೆ ಮಕ್ಕಳನ್ನು ಕಾಯುವುದೇ ದಿನನಿತ್ಯದ ಕಾಯಕವಾಗಿದೆ. ಸಂಬಂಧಿತರು ಸ್ಪಂದಿಸಬೇಕು.
| ಚಂದ್ರಕಾಂತ ಕುಲಕರ್ಣಿ , ಬಡಾವಣೆ ನಿವಾಸಿ