ಹುಬ್ಬಳ್ಳಿ: ಮಾರುತಿ ವ್ಯಾನ್ನಲ್ಲಿ ಬಂದ ನಾಲ್ಕೈದು ಜನ ಅಪರಿಚಿತರು ವಿತರಿಸುತ್ತಿದ್ದ ಆಹಾರವನ್ನು ಗ್ರಾಮಸ್ಥರು ಸ್ವೀಕರಿಸದೇ ವಾಪಸ್ ಕಳುಹಿಸಿದ ಘಟನೆ ತಾಲೂಕಿನ ಶೆರೆವಾಡ ಗ್ರಾಮದಲ್ಲಿ ಬುಧವಾರ ನಡೆದಿದೆ.
ಚಿತ್ರಾನ್ನ ಹಾಗೂ ನೀರಿನ ಬಾಟಲಿಗಳನ್ನು ವಿತರಿಸಲು ಅವರು ಬಂದಿದ್ದ ಅವರ ಬಳಿ ಯಾವುದೇ ಅನುಮತಿ, ಪಾಸ್ ಇರಲಿಲ್ಲ. ಹಾಗಾಗಿ, ಗ್ರಾಮಸ್ಥರಾರೂ ಅವರಿಂದ ಆಹಾರ ಸ್ವೀಕರಿಸಲಿಲ್ಲ. ಅಲ್ಲದೆ, ಗ್ರಾಮದಲ್ಲಿ ಜಾತ್ರೆ ನಿಮಿತ್ತ ನಿಯೋಜಿತರಾಗಿದ್ದ ಪೊಲೀಸರಿಗೆ ಮಾಹಿತಿ ನೀಡಿದ್ದರು. ಪೊಲೀಸರು ಬಂದು ವಿಚಾರಿಸಿದಾಗ, ‘ತಾವು ಹಳೇಹುಬ್ಬಳ್ಳಿಯಿಂದ ಬಂದಿದ್ದು ಬಡವರಿಗೆ, ನಿರ್ಗತಿಕರಿಗೆ ಆಹಾರ ವಿತರಿಸುತ್ತಿದ್ದೇವೆ’ ಎಂದು ಅಪರಿಚಿತರು ತಿಳಿಸಿದರು. ಅವರ ವಾಹನ ಸಂಖ್ಯೆ, ಮೊಬೈಲ್ ಸಂಖ್ಯೆ, ವಿಳಾಸ ಪಡೆದ ಪೊಲೀಸರು, ಜಿಲ್ಲಾಡಳಿತದ ಗಮನಕ್ಕೆ ತಂದು ಸರಿಯಾದ ಅನುಮತಿ ಪಡೆದುಕೊಂಡು ವಿತರಿಸಿ ಎಂದು ಸೂಚುಸಿ ಯುವಕರನ್ನು ವಾಪಸ್ ಕಳುಹಿಸಿದರು.
ಕೌಟುಂಬಿಕ ದೌರ್ಜನ್ಯ ತಡೆಗೆ ಸಹಾಯವಾಣಿ
ಧಾರವಾಡ: ಲಾಕ್ಡೌನ್ ಸಂದರ್ಭದಲ್ಲಿ ಯಾವುದಾರೂ ಕುಟುಂಬದಲ್ಲಿ ಕೌಟುಂಬಿಕ ದೌರ್ಜನ್ಯಗಳು ನಡೆದರೆ ಉಚಿತ ಸಹಾಯವಾಣಿ ಮತ್ತು ದೂರವಾಣಿ ಮೂಲಕ ಸಂತ್ರಸ್ತರ ನೆರವಿಗೆ ಧಾವಿಸಲು ಜಿಲ್ಲಾಡಳಿತ ಕ್ರಮ ಕೈಗೊಂಡಿದೆ. ರಾಜ್ಯದಲ್ಲೇ ಮೊದಲ ಬಾರಿಗೆ ಆರಂಭವಾಗಿರುವ ದೂರವಾಣಿ ಆಪ್ತಸಲಹಾ ಕೇಂದ್ರಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್ ಚಾಲನೆ ನೀಡಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಸಭೆಯಲ್ಲಿ ಕೌಟುಂಬಿಕ ದೌರ್ಜನ್ಯ ತಡೆಗೆ ಪ್ರಾರಂಭಿಸಿರುವ ಸಾಂತ್ವನ ಸಹಾಯವಾಣಿ ಭಿತ್ತಿಪತ್ರಗಳನ್ನು ಬಿಡುಗಡೆ ಮಾಡಿದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ನಿರ್ವಹಣೆಗೊಳ್ಳುತ್ತಿರುವ ಸಹಾಯವಾಣಿ ಸಂಖ್ಯೆ 181, ದೂರವಾಣಿ ಸಂಖ್ಯೆ 0836-2445484, 0836-2747353 ಕರೆಮಾಡಿ ಪರಿಹಾರ ಕಂಡುಕೊಳ್ಳಬಹುದು. ಮಹಿಳೆಯರಿಗೆ ಆಗುತ್ತಿರುವ ಕೌಟುಂಬಿಕ ದೌರ್ಜನ್ಯದಂತಹ ಪ್ರಕರಣಗಳಿಗೆ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗುವಂತೆ ಸರ್ಕಾರ ಸತತವಾಗಿ ಪ್ರಯತ್ನ ಮುಂದುವರಿಸಿದೆ ಎಂದರು.
ಶಾಸಕರಾದ ಬಸವರಾಜ ಹೊರಟ್ಟಿ, ಅರವಿಂದ ಬೆಲ್ಲದ, ಸಿ.ಎಂ.ನಿಂಬಣ್ಣವರ, ಶಂಕರ ಪಾಟೀಲ ಮುನೇನಕೊಪ್ಪ, ಪ್ರಸಾದ ಅಬ್ಬಯ್ಯ, ಪ್ರದೀಪ ಶೆಟ್ಟರ್, ಜಿಲ್ಲಾಧಿಕಾರಿ ದೀಪಾ ಚೋಳನ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ ಭಾರತಿ ಶೆಟ್ಟರ್, ಇತರರು ಇದ್ದರು.