ಗೌರಿಬಿದನೂರು: ನಮ್ಮ ಪಕ್ಷದ ಬಗ್ಗೆ ಪ್ರತಿ ಪಕ್ಷಗಳು ಮಾಡುತ್ತಿರುವ ಅಪಪ್ರಚಾರಕ್ಕೆ ಕಿವಿಗೊಡಬಾರದು ಎಂದು ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ರವಿನಾರಾಯಣ ರೆಡ್ಡಿ ಮನವಿ ಮಾಡಿದರು.
ತಾಲೂಕಿನ ಎಚ್.ನಾಗಸಂದ್ರದಲ್ಲಿ ಬುಧವಾರ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಬಿಜೆಪಿ- ಕಾಂಗ್ರೆಸ್ನೊಂದಿಗೆ ಹೊಂದಾಣಿಕೆ ಮಾಡಿಕೊಂಡಿದೆ ಎಂದು ತಾಲೂಕಿನ ಜೆಡಿಎಸ್ ಮುಖಂಡರು ಹಾಗೂ ಪುಟ್ಟಸ್ವಾಮಿಗೌಡ ಬಣದ ಮುಖಂಡರು ಸುದ್ದಿ ಹಬ್ಬಿಸುತ್ತಿದ್ದಾರೆ. ಅವರೊಂದಿಗೆ ನಮ್ಮ ಪಕ್ಷದ ಕೆಲವು ಪ್ರಮುಖ ಮುಖಂಡರು ವ್ಯವಸ್ಥಿತ ರೀತಿಯಲ್ಲಿ ಅಪ ಪ್ರಚಾರ ಮಾಡುತ್ತಿದ್ದಾರೆ. ಚುನಾವಣೆ ಸಂದರ್ಭದಲ್ಲಿ ಇದು ಸರ್ವೇ ಸಾಮಾನ್ಯ. ನಿಷ್ಠಾವಂತ ಕಾರ್ಯಕರ್ತರು ಇಂತಹ ವಿಚಾರಗಳಿಗೆ ಕಿವಿಗೊಡಬಾರದು ಎಂದರು.
ತಾಲೂಕಿನ ಹಾಲಗಾನಹಳ್ಳಿ ಗ್ರಾಪಂ ವ್ಯಾಪ್ತಿಯ ಚಂದನದೂರು ಗ್ರಾಮದಲ್ಲಿ ಸ್ಪರ್ಧಿಸಿರುವ ಐದು ಅಭ್ಯರ್ಥಿಗಳು ಈ ಮೊದಲು ಕಾಂಗ್ರೆಸ್ನಲ್ಲಿದ್ದರು. ಈಗ ಬಿಜೆಪಿ ಬೆಂಬಲಿಸಿ ಚುನಾವಣೆಗೆ ಸ್ಪರ್ಧಿಸಿದ್ದಾರೆ. ಕೆಲ ಗ್ರಾಮ ಪಂಚಾಯಿತಿಗಳಲ್ಲಿ ಅಲ್ಲಿನ ರಾಜಕೀಯ ಪರಿಸ್ಥಿತಿಗೆ ಅನುಗುಣವಾಗಿ ಕೆಲವರು ಹೊಂದಾಣಿಕೆ ಮಾಡಿಕೊಂಡಿದ್ದಾರೆ. ಅದಕ್ಕೂ ಪಕ್ಷಕ್ಕೂ ಯಾವುದೇ ರೀತಿಯ ಸಂಬಂಧವಿಲ್ಲ. ಚುನಾವಣೆ ಬಳಿಕ ತಾಲೂಕಿನ ರಾಜಕೀಯ ಚಿತ್ರಣ ಬದಲಾಗಲಿದೆ ಎಂದು ತಿಳಿಸಿದರು.
ಕಪ್ಪು ಹಣದ ಕೇಕೆ : ಕಳೆದ ಚುನಾವಣೆಯಂತೆ ಈ ಬಾರಿ ಕೂಡ ಪೈಪೋಟಿ ನೀಡುತ್ತೇವೆ. ಇದರಲ್ಲಿ ಯಾವುದೇ ಅನುಮಾನವಿಲ್ಲ. ಈ ಹಿಂದೆ ತಾಲೂಕಿನ ರಾಜಕಾರಣದಲ್ಲಿ ಕಪ್ಪು ಹಣ ಚಲಾವಣೆಯಲ್ಲಿ ಇರಲಿಲ್ಲ, ಆದರೆ ಈಗ ಕಪ್ಪು ಹಣ ಎಲ್ಲೆಡೆ ತನ್ನ ಕೇಕೆ ಹಾಕುತ್ತಿದೆ. ಪ್ರತಿ ಪಕ್ಷಗಳು ಹಣ ಬಲ ಪ್ರದರ್ಶಿಸುತ್ತಿವೆ. ಅದರೆ ನಮ್ಮ ಪಕ್ಷದ ಬೆಂಬಲಿತ ಅಭ್ಯರ್ಥಿಗಳಿಗೆ ಎಲ್ಲ ಪಂಚಾಯಿತಿಗಳಲ್ಲಿ ಆರ್ಥಿಕ ಪಕ್ಷ ಸಂಪನ್ಮೂಲ ಒದಗಿಸುವುದಿಲ್ಲ. ಜನರನ್ನು ವಿಶ್ವಾಸದಿಂದ ಗೆಲ್ಲುತ್ತೇವೆ ಎಂದು ರವಿನಾರಾಯಣ ರೆಡ್ಡಿ ತಿಳಿಸಿದರು.