ಯಲ್ಲಾಪುರ: ಸ್ಕೂಟಿಗೆ ಟ್ಯಾಂಕರ್ ಡಿಕ್ಕಿ ಹೊಡೆದು ಅಗ್ನಿಶಾಮಕ ದಳದ ಅಧಿಕಾರಿ ಹಾಗೂ ಆತನ ಮಗಳು ಸ್ಥಳದಲ್ಲೇ ಮೃತಪಟ್ಟ ಘಟನೆ ರಾಷ್ಟ್ರೀಯ ಹೆದ್ದಾರಿ 63 ರ ಮೇಲೆ ಅರಬೈಲ್ ಬಳಿ ಮಂಗಳವಾರ ಸಂಭವಿಸಿದೆ.
ಯಲ್ಲಾಪುರ ಅಗ್ನಿಶಾಮಕ ದಳದಲ್ಲಿ ಅಧಿಕಾರಿಯಾಗಿದ್ದ ಅಂಕೋಲಾ ತಾಲೂಕಿನ ಹಾರವಾಡದ ವಿನೋದ ಕಿಂದರ್ಕರ್(57) ಹಾಗೂ ಪುತ್ರಿ ಸುನೇಹಾ ವಿನೋದ ಕಿಂದರ್ಕರ್ (13) ಮೃತರು. ಸೋಮವಾರ ರಾತ್ರಿ ಕರ್ತವ್ಯ ನಿರ್ವಹಿಸಿ, ಬೆಳಗ್ಗೆ ತನ್ನ ಊರಾದ ಹಾರವಾಡಕ್ಕೆ ಹೋಗುವಾಗ ಈ ದುರ್ಘಟನೆ ಸಂಭವಿಸಿದೆ. ಈ ಕುರಿತು ಯಲ್ಲಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಾರದಲ್ಲಿ 7 ಸಾವು: ತಾಲೂಕು ವ್ಯಾಪ್ತಿಯಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ ಹದಗೆಟ್ಟು ಹೊಂಡಗಳು ಉಂಟಾಗಿರುವುದರಿಂದ ಅಪಘಾತಗಳ ಸಂಖ್ಯೆಯೂ ಹೆಚ್ಚುತ್ತಿದೆ. ಕಳೆದ ಒಂದು ವಾರದೊಳಗೆ ಮೂರು ಅಪಘಾತಗಳಲ್ಲಿ ಒಟ್ಟು ಏಳು ಜನರು ಮೃತಪಟ್ಟಿದ್ದಾರೆ. ಇದರಲ್ಲಿ ಎರಡು ಅಪಘಾತಗಳಿಗೆ ಟ್ಯಾಂಕರ್ಗಳೇ ಕಾರಣವಾಗಿದ್ದು, ಹಾಳಾದ ರಸ್ತೆಯಲ್ಲಿ ಟ್ಯಾಂಕರ್ಗಳ ಅತಿಯಾದ ವೇಗಕ್ಕೆ ಕಡಿವಾಣ ಹಾಕುವ ಕಾರ್ಯ ಆಗಬೇಕಿದೆ.