ವಿರೇಶ ಹಾರೊಗೇರಿ ಕಲಘಟಗಿ
ತಾಲೂಕಿನಲ್ಲಿ ಆರಿದ್ರಾ ಮಳೆ ಆಗಮನದಿಂದ ರೈತರೆಲ್ಲ ಸಂತಸಗೊಂಡಿದ್ದಾರೆ. 15- 20 ದಿನಗಳ ಹಿಂದೆ ಬಿತ್ತನೆಯಾಗಿದ್ದ ಗೋವಿನಜೋಳ ಬೆಳೆ ಈಗ ಸಮರ್ಪಕ ಮಳೆ ಆಗುತ್ತಿರುವುದರಿಂದ ನಳನಳಿಸುತ್ತಿದೆ. ಬೆಳೆಗೆ ರೋಗ ತಗುಲಬಾರದೆಂದು ಮುಂಜಾಗ್ರತೆ ಕ್ರಮವಾಗಿ ಬೆಳೆಗೆ ಕೀಟನಾಶಕ ಸಿಂಪಡಣೆ, ರಸಗೊಬ್ಬರ ಹಾಕುತ್ತಿದ್ದಾರೆ.
ಪ್ರತಿ ವರ್ಷದಂತೆ ಈ ಬಾರಿಯೂ ತಾಲೂಕಿನಾದ್ಯಂತ ಭತ್ತ ಬೆಳೆ ಬಿತ್ತನೆ ಪ್ರಮಾಣ ಇಳಿಮುಖವಾಗಿದೆ. ವಾಣಿಜ್ಯ ಬೆಳೆಗಳಾದ ಗೋವಿನಜೋಳ, ಸೋಯಾಬೀನ್ ಬಿತ್ತನೆ ಪ್ರಮಾಣ ಮಾತ್ರ ಹೆಚ್ಚಾಗಿದೆ. ಕಳೆದ ವರ್ಷ ಅತಿವೃಷ್ಟಿಯಿಂದ ಶೇ. 80ರಷ್ಟು ಬೆಳೆಗಳು ನೀರಿನಲ್ಲಿ ಕೊಚ್ಚಿ ಹೋಗಿದ್ದವು. ವ್ಯವಸಾಯದ ಸಾಲ ಪಾವತಿಸಲಾಗದೆ ರೈತರು ಪರದಾಡುತ್ತಿದ್ದಾರೆ. ಈ ವರ್ಷ ಮಳೆರಾಯ ಸಕಾಲಕ್ಕೆ ಸಮರ್ಪಕವಾಗಿ ಸುರಿದರೆ ಉತ್ತಮ ಫಸಲು ಕೈ ಸೇರಬಹುದೆಂಬ ನಿರೀಕ್ಷೆಯಲ್ಲಿ ರೈತರಿದ್ದಾರೆ.
ಈ ಬಾರಿ ಕಲಘಟಗಿ ತಾಲೂಕಿನಲ್ಲಿ ಗೋವಿನಜೋಳ ಬೆಳೆಯನ್ನೇ ಹೆಚ್ಚಾಗಿ ಬೆಳೆಯಲಾಗಿದೆ. ಹೋದ ವರ್ಷ ಬೆಳೆಯೆಲ್ಲ ಕೊಚ್ಚಿ ಹೋಗಿದ್ದರಿಂದ ಸಾಲ ತೀರಿಸಲಾಗದ ಸ್ಥಿತಿ ರೈತರದ್ದಾಗಿದೆ. ಈ ವರ್ಷವಾದರೂ ಸಕಾಲಕ್ಕೆ ಉತ್ತಮ ಮಳೆಯಾಗಿ ಬಂಪರ್ ಬೆಳೆ ಬಂದು ರೈತರ ಬಾಳು ಹಸನಾದರೆ ಸಾಕು.
| ರವಿ ತಡಸ, ತಬಕದಹೊನ್ನಿಹಳ್ಳಿ ರೈತ
ಮುಂಗಾರಿನ ಆರಂಭದಲ್ಲಿ ಕೃಷಿ ಇಲಾಖೆ ವಿತರಿಸಿದ ಸೋಯಾಬೀನ್ ಬೀಜಗಳನ್ನು ಬಿತ್ತಲಾಗಿತ್ತು. ಆದರೆ, ಅವು ಸರಿಯಾಗಿ ಮೊಳಕೆಯೊಡೆಯಲಿಲ್ಲ. ದನಕರುಗಳ ಮೇವಿನ ಕೊರತೆ ನೀಗಲು ಗೋವಿನಜೋಳ ಬಿತ್ತಲಾಗಿದೆ. ಉತ್ತಮ ಫಸಲಿನ ನೀರಿಕ್ಷೆಯಲ್ಲಿದ್ದೇವೆ.
| ಈಶ್ವರ ಪಾಟೀಲ, ಬೇಗೂರ ಗ್ರಾಮದ ರೈತ
ಕಲಘಟಗಿ ತಾಲೂಕಿನಾದ್ಯಂತ ಗೋವಿನಜೋಳ ಬೆಳೆದ ರೈತರು ಅಂತರ ಬೇಸಾಯ ಮಾಡದಿರುವುದು ಗಮನಕ್ಕೆ ಬಂದಿದೆ. ಕಾರಣ ಪ್ರತಿಯೊಬ್ಬ ರೈತರು ಎಡೆಕುಂಟೆ ಹೊಡೆದು ಗೋವಿನಜೋಳಕ್ಕೆ ಮಣ್ಣು ಏರಿಸುವುದರಿಂದ ಬೆಳೆಗೆ ತೇವಾಂಶ ಲಭಿಸಲಿದೆ. 15ರಿಂದ 30 ದಿನಗಳ ಗೋವಿನಜೋಳ ಬೆಳೆಗೆ ಲದ್ದಿ ಹುಳುಗಳ ಬಾಧೆ ಕಂಡುಬಂದಲ್ಲಿ ರೈತರು ಇಮಾಮೆಕ್ಟಿನ್ ಬೆಂಜೊಯೇಟ್ ಕೀಟನಾಶಕವನ್ನು ತಕ್ಷಣ ಸಿಂಪಡಿಸಿ ರೋಗವನ್ನು ಹತೋಟಿಗೆ ತರಬೇಕು.
| ಎನ್.ಎಫ್. ಕಟ್ಟೆಗೌಡರು, ಕಲಘಟಗಿ ಕೃಷಿ ಸಹಾಯಕ ನಿರ್ದೇಶಕ