ದಾವಣಗೆರೆ: ಮನಸ್ಸಿನ ನವೀಕರಣಕ್ಕಾಗಿ ಇಷ್ಟ ಪ್ರಾಪ್ತಿ ಜತೆಗೆ ಅನಿಷ್ಟಗಳಿಂದ ನಿವೃತ್ತಿ ಪಡೆಯಬೇಕು ಎಂದು ರಾಮಕೃಷ್ಣ ಮಿಷನ್ನ ಶ್ರೀ ಸ್ವಾಮಿ ತ್ಯಾಗೀಶ್ವರಾನಂದ ಹೇಳಿದರು.
ಶ್ರೀ ಕನ್ಯಕಾಪರಮೇಶ್ವರಿ ದೇವಸ್ಥಾನದ ಸಂಘದಿಂದ ನವೀಕೃತ ಕಾಸಲ್ ಎಸ್. ವಿಠ್ಠಲ್ ಶ್ರೀಮತಿ ಸುನಂದಮ್ಮ ಕಲ್ಯಾಣ ಮಂಟಪದ ಉದ್ಘಾಟನೆ ಹಾಗೂ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಕಟ್ಟಡ ನವೀಕರಿಸುವಾಗ ಅಡಿಪಾಯ ಹಾಗೆ ಉಳಿಸಿಕೊಳ್ಳಲಾಗುತ್ತದೆ. ಹಳೆಯದು ಹಾಗೂ ನಿರುಪಯುಕ್ತವಾದುದನ್ನು ತೆಗೆದು ಹಾಕಿ ಉಪಯುಕ್ತವಾದುದನ್ನು ಅಳವಡಿಸಬೇಕು. ಮನಸ್ಸಿನ ಬದಲಾವಣೆಯಲ್ಲಿ ಈ ಪ್ರಕ್ರಿಯೆ ಮುಖ್ಯ ಎಂದರು.
ನಮ್ಮ ದೇವತೆಗಳು, ಸಂಸ್ಕೃತಿ, ಆಚಾರ ಹಾಗೂ ವಿಚಾರಗಳನ್ನು ಬಿಡಬೇಕಿಲ್ಲ. ಅದರ ಆಧಾರದ ಮೇಲೆ ಹೊಸತನವನ್ನು ಕಟ್ಟಿಕೊಳ್ಳಬೇಕು. ಪರಿವರ್ತನೆ ಎಂದರೆ ಉಡುಗೆ – ತೊಡುಗೆ ಇಲ್ಲವೇ ಫ್ಯಾಷನ್ ಬದಲಿಸಿದಂತೆ ಅಲ್ಲ. ವ್ಯಕ್ತಿತ್ವ ನಿರ್ಮಾಣವೇ ನಿಜವಾದ ಬೆಳವಣಿಗೆ ಎಂದು ಹೇಳಿದರು.
ಕರ್ನಾಟಕ ಆರ್ಯವೈಶ್ಯ ಮಹಾಸಭಾ ಅಧ್ಯಕ್ಷ ಆರ್.ಪಿ. ರವಿಶಂಕರ್ ಮಾತನಾಡಿ, ಸಮಾಜ ಯುವ ಪ್ರತಿಭೆಗಳನ್ನು ಕೇವಲ ನಮ್ಮ ಮನೆ ಆಸ್ತಿಗಳನ್ನಾಗಿ ಮಾಡದೇ ದೇಶದ ಆಸ್ತಿಗಳಾಗಿ ರೂಪಿಸಬೇಕು. ವೈದ್ಯಕೀಯ – ಇಂಜಿನಿಯರಿಂಗ್ ಕಲಿಕೆಗೆ ಸೀಮಿತವಾಗದೇ ಸಮಾಜದಲ್ಲಿ ಹೆಚ್ಚು ಸೇವೆಗೆ ಅವಕಾಶ ನೀಡುವ ಐಎಎಸ್ ಹಾಗೂ ಕೆಎಎಸ್ ರೀತಿಯ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಬೇಕು ಎಂದು ಕಿವಿಮಾತು ಹೇಳಿದರು.
ದೇವಸ್ಥಾನ ಸಂಘದ ಅಧ್ಯಕ್ಷ ಆರ್.ಎಲ್. ಪ್ರಭಾಕರ, ಆಜೀವ ಗೌರವಾಧ್ಯಕ್ಷ ಆರ್.ಎಸ್. ನಾರಾಯಣಸ್ವಾಮಿ, ಆರ್.ಜಿ. ನಾಗೇಂದ್ರ ಪ್ರಕಾಶ್, ಕಾರ್ಯಾಧ್ಯಕ್ಷ ಕಾಸಲ್ ಎಸ್. ಸತೀಶ್, ಕಾರ್ಯದರ್ಶಿ ಜೆ. ರವೀಂದ್ರ ಗುಪ್ತ, ಸಹ ಕಾರ್ಯದರ್ಶಿ ಎ.ಎಸ್.ಸತ್ಯನಾರಾಯಣಸ್ವಾಮಿ, ಖಜಾಂಚಿ ತಾತಾ ವೆಂಕಟಾಚಲಪತಿ ಶ್ರೇಷ್ಠಿ, ಕನ್ನಿಕಾ ಪರಮೇಶ್ವರಿ ಕೋ ಆಪರೇಟಿವ್ ಬ್ಯಾಂಕ್ ಅಧ್ಯಕ್ಷ ಆರ್.ಜಿ.ಶ್ರೀನಿವಾಸಮೂರ್ತಿ, ಆರ್ಯವೈಶ್ಯ ಸಮಾಜದ ಮುಖಂಡರಾದ ಎ.ಆರ್. ರವಿಕುಮಾರ್, ಕೆ.ಎನ್. ಅನಂತರಾಮ ಶೆಟ್ಟಿ, ಮಾಕಂ ನಾಗರಾಜ ಗುಪ್ತ ಇತರರಿದ್ದರು.