ಕಾರವಾರ: ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಕೆಲಸ ಮಾಡುವ ಅತಿಥಿ ಶಿಕ್ಷಕರಿಗೆ ಹೆಚ್ಚಿನ ವೇತನ ನೀಡಲು ಮುಂಬರುವ ಬಜೆಟ್ನಲ್ಲಿ ಅನುದಾನ ಮೀಸಲಿಡಲಾಗುವುದು ಎಂದು ಶಿಕ್ಷಣ ಸಚಿವ ಸುರೇಶ ಕುಮಾರ್ ಹೇಳಿದರು.
ಹೊನ್ನಾವರ ತಾಲೂಕಿನ ಮಹಿಮೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸುವರ್ಣ ಮಹೋತ್ಸವ ಕಾರ್ಯಕ್ರಮವನ್ನು ಶನಿವಾರ ಉದ್ಘಾಟಿಸಿ ಅವರು ಮಾತನಾಡಿದರು.
ಗ್ರಾಮೀಣ ಭಾಗದ ಸರ್ಕಾರಿ ಶಾಲೆಗಳಿಗೆ ಸರ್ಕಾರಿ ಶಿಕ್ಷಕರು ಬರುತ್ತಿಲ್ಲ. ಅಲ್ಲಿ ಅತಿಥಿ ಶಿಕ್ಷಕರನ್ನು ನೇಮಿಸಿದರೂ ಅವರಿಗೆ ಅತಿ ಕಡಿಮೆ ವೇತನ ನೀಡಲಾಗುತ್ತಿದೆ. ಅದನ್ನು ಸರಿಪಡಿಸಲಾಗುವುದು ಎಂದರು.
ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ ಸಿಕ್ಕಿದರೂ ಕೆಲವು ಸಮಸ್ಯೆಗಳಿವೆ. ಪಾಲಕರು ಖಾಸಗಿ ಶಾಲೆಗಳ ವ್ಯಾಮೋಹಕ್ಕೆ ಒಳಗಾಗಿ ಸರ್ಕಾರಿ ಶಾಲೆಗಳನ್ನು ತೊರೆಯುತ್ತಿದ್ದಾರೆ. ಇಂದು ಖಾಸಗಿ ಶಾಲೆಗಳ ಬಗ್ಗೆ ಇರುವ ಆಕರ್ಷಣೆಯನ್ನು ಸರ್ಕಾರಿ ಶಾಲೆಗಳಿಗೆ ತಂದು ಸರ್ಕಾರಿ ಶಾಲೆಯ ದಾಖಲಾತಿಗಾಗಿ ಪಾಲಕರು ಸರದಿಯಲ್ಲಿ ನಿಲ್ಲುವಂತೆ ಮಾಡುವ ಬಹುದೊಡ್ಡ ಯೋಜನೆ ಇನ್ನು ಮೂರ್ನಾಲ್ಕು ವರ್ಷದಲ್ಲಿ ಜಾರಿಗೆ ತರಲಾಗುವುದು ಎಂದರು.
ಅಧ್ಯಕ್ಷತೆ ವಹಿಸಿದ್ದ ಭಟ್ಕಳ ಶಾಸಕ ಸುನೀಲ ನಾಯ್ಕ, ಪಾಲಕರ ದೌರ್ಬಲ್ಯವನ್ನು ಬಂಡವಾಳ ಮಾಡಿಕೊಂಡು ನಾಯಿ ಕೊಡೆಗಳಂತೆ ಹುಟ್ಟುತ್ತಿರುವ ಖಾಸಗಿ ಶಾಲೆಗಳಿಗೆ ಖಡಿವಾಣ ಹಾಕಬೇಕಿದೆ ಎಂದರು.
ಹಿರಿಯ ಪತ್ರಕರ್ತ ರವೀಂದ್ರ ಭಟ್, ವಿಶೇಷ ಆಹ್ವಾನಿತರಾಗಿದ್ದರು. ಜಿಪಂ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ರತ್ನಾಕರ ನಾಯ್ಕ, ಸದಸ್ಯೆ ಪುಷ್ಪಾ ನಾಯ್ಕ, ಡಿಡಿಪಿಐ ಹರೀಶ ಗಾಂವಕರ್, ಹೈದರ್ ಖಾನ್ ವೇದಿಕೆಯಲ್ಲಿದ್ದರು.