ಆಲೂರು: ತಾಲೂಕಿನ ಇತಿಹಾಸ ಪ್ರಸಿದ್ಧ ಅಡಿಬೈಲು ರಂಗನಾಥಸ್ವಾಮಿ ದೇವಸ್ಥಾನದ ಹುಂಡಿ ಹಣ ಎಣಿಕೆ ಕಾರ್ಯ ಶುಕ್ರವಾರ ನಡೆಯಿತು.
ಕೆ.ಹೊಸಕೋಟೆ ಹೋಬಳಿ ರಾಜಸ್ವ ನಿರೀಕ್ಷಕ ಸಿ.ವಸಂತ್ಕುಮಾರ್ ಮಾತನಾಡಿ, ಪ್ರತಿ ವರ್ಷ ಜಾತ್ರಾ ಮಹೋತ್ಸವ ಮುಗಿದ ನಂತರ ಈ ದೇವಸ್ಥಾನದ ಹುಂಡಿ ಹಣ ಎಣಿಕೆ ಮಾಡುತ್ತೇನೆ. ಅಲ್ಲದೇ ಇತ್ತೀಚೆಗೆ ತಾಲೂಕಿನ ಹಲವು ದೇವಸ್ಥಾನಗಳಲ್ಲಿ ಕಳ್ಳತನ ಪ್ರಕರಣಗಳು ಹೆಚ್ಚಾಗಿದ್ದು, ಅದರಿಂದ ತಪ್ಪಿಸಲು ಜಾತ್ರೆ ಮರುದಿನವೇ ಹುಂಡಿ ಹಣ ಎಣಿಕೆ ಮಾಡಲಾಗುತ್ತಿದೆ ಎಂದರು.
ದೇವಸ್ಥಾನ ಹುಂಡಿಯಲ್ಲಿ ಒಟ್ಟು 1,59,930 ರೂ. ಸಂಗ್ರಹವಾಗಿದೆ. 2022, ಫೆಬ್ರವರಿಯಲ್ಲಿ ದೇವಸ್ಥಾನದಲ್ಲಿ ಹುಂಡಿ ಹಣ ಎಣಿಕೆ ಮಾಡಿದ್ದಾಗ 1,01,380 ರೂ. ಸಂಗ್ರಹವಾಗಿತ್ತು ಎಂದರು.
ದೇವಾಲಯದ ಆಡಳಿತ ಮಂಡಳಿ ಅಧ್ಯಕ್ಷ ಉಮೇಶ್, ಪ್ರಧಾನ ಅರ್ಚಕ ನಾರಾಯಣ್, ಗ್ರಾಮ ಲೆಕ್ಕಾಧಿಕಾರಿಗಳಾದ ರಂಗಸ್ವಾಮಿ, ಕರಿಬಸವಯ್ಯ, ಗ್ರಾಮ ಸಹಾಯಕರು ಹಾಗೂ ಗ್ರಾಮಸ್ಥರು ಹಾಜರಿದ್ದರು.