ಭರಮಸಾಗರ: ಇಲ್ಲಿನ ಬೈಪಾಸ್ ರಸ್ತೆಯಿಂದ ಪಟ್ಟಣದೊಳಗೆ ಸಂಚರಿಸುವ ಅಂಡರ್ ಪಾಸ್ ಬಳಿಯ ಕೂಡು ರಸ್ತೆಯಲ್ಲಿ ಸಣ್ಣ ಮಳೆ ಬಂದರೂ ನಿಂತು ಸಂಚರಿಸುವ ವಾಹನ ಸವಾರರಿಗೆ ನಿತ್ಯ ಕೆಸರಿನ ಸ್ನಾನದ ಅನುಭವ ಮೂಡಿಸುತ್ತಿದೆ.
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅವೈಜ್ಞಾನಿಕ ರಸ್ತೆ ನಿರ್ಮಾಣದಿಂದಾಗಿ ಇಂಥ ಪರಿಸ್ಥಿತಿ ನಿರ್ಮಾಣವಾಗಿದ್ದು, ಸಾರ್ವಜನಿಕರು ಕಿರಿ ಕಿರಿ ಅನುಭವಿಸುವಂತಾಗಿದೆ.
ಸ್ವಲ್ಪ ಮಳೆ ಬಂತೆಂದರೆ ಸಾಕು ದೇವರ ಗೊಲ್ಲರಹಟ್ಟಿ ಕಡೆಯಿಂದ ಹಾಗೂ ಸೇವಾರಸ್ತೆಯಿಂದ ಮಣ್ಣಿನ ಜತೆ ನೀರು ಹರಿದು ಬಂದು ಹಳ್ಳದೋಪಾದಿಯಲ್ಲಿ ನಿಲ್ಲುವ ಮೂಲಕ ಸವಾರರಿಗೆ ರಾಚುತ್ತಿದೆ.
ಈ ಮಾರ್ಗದಲ್ಲಿ ಜಾರಿಬಿದ್ದು ಅಪಘಾತಗಳು ಸಂಭವಿಸಿವೆ. ಈ ಬಗ್ಗೆ ಅಂಡರ್ ಪಾಸ್ ನಿರ್ಮಾಣವಾಗಿ ನಾಲ್ಕು ವರ್ಷವಾದರೂ ಈ ಸಮಸ್ಯೆ ನಿವಾರಣೆ ಆಗಿಲ್ಲ. ಮಳೆ ಬಂದಾಗ ಈ ನೀರನ್ನು ತೆರವುಗೊಳಿಸುವ ಕೆಲಸ ಕೂಡ ಆಗುತ್ತಿಲ್ಲ ಎಂಬುದು ಬೈಕ್ ಸವಾರರಾದ ರಜತಾದ್ರ, ರಾಘವೇಂದ್ರ, ಇಬ್ರಾಹಿಂ, ರಾಜಾಚಾರಿ ಇತರರ ದೂರು.