ಬೆಂಗಳೂರು: ಯಶವಂತಪುರ ಮೇಲ್ಸೇತುವೆಯಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರ ಬೆಂಗಾವಲು ವಾಹನವು ಅಪಘಾತಕ್ಕೀಡಾಗಿದ್ದು, ಈ ಅವಘಡದ ಬಳಿಕ ಸಂಭವಿಸಿದ ಸರಣಿ ಅಪಘಾತದಲ್ಲಿ ಹಲವರು ಗಾಯಗೊಂಡಿದ್ದಾರೆ.
ಜನವರಿ 2ರಂದು ತುಮಕೂರಿನಲ್ಲಿ ಪ್ರಧಾನಿ ಮೋದಿ ಕಾರ್ಯಕ್ರಮದ ನಡೆಯಲಿದೆ. ಹೀಗಾಗಿ ಸಿದ್ಧತೆ ವೀಕ್ಷಿಸಲು ಸಿಎಂ ಬಿಎಸ್ವೈ ಇಂದು ಬೆಳಗ್ಗೆ ತುಮಕೂರಿಗೆ ತೆರಳಿದ್ದಾರೆ. ಈ ವೇಳೆ ಯಶವಂತಪುರ ಮೇಲ್ಸುತುವೆಯಲ್ಲಿ ಬಿಎಸ್ವೈ ಬೆಂಗಾಲು ವಾಹನ(Ka 01 G 6661) ಅಪಘಾತಕ್ಕೀಡಾಗಿದ್ದು, ಇದರಿಂದ ಸ್ಥಳದಲ್ಲಿ ಸರಣಿ ಅಪಘಾತವೂ ಸಂಭವಿಸಿದೆ.
ಅತಿವೇಗದಿಂದ ಬಂದ ಬೆಂಗಾವಲು ವಾಹನ ಆಯತಪ್ಪಿ ರಸ್ತೆ ವಿಭಜಕ ಏರಿ, ಪಕ್ಕದ ರಸ್ತೆಗೆ ಎಗರಿ ಎದುರಿನಿಂದ ಬರುತ್ತಿದ್ದ ಕ್ಯಾಂಟರ್ಗೆ ಡಿಕ್ಕಿ ಹೊಡೆದಿದೆ. ಕ್ಯಾಂಟರ್ ದಿಢೀರ್ ಬ್ರೇಕ್ ಹಾಕುತ್ತಿದ್ದಂತೆ ಹಿಂಬದಿ ಆಟೋ ಕೂಡ ಡಿಕ್ಕಿಯಾಗಿದೆ.
ಘಟನೆಯಲ್ಲಿ ಕಾರು, ಲಾರಿ ಮತ್ತು ಆಟೋ ಜಖಂ ಆಗಿದ್ದು, ಅದೃಷ್ಟವಶಾತ್ ಯಾವುದೇ ರೀತಿಯ ಪ್ರಾಣ ಹಾನಿ ಸಂಭವಿಸಿಲ್ಲ. ಮೂರು ವಾಹನ ಚಾಲಕರಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು, ಗಾಯಳುಗಳನ್ನು ಆಂಬುಲೆನ್ಸ್ ಮೂಲಕ ಆಸ್ಪತ್ರೆಗೆ ದಾಖಲಿಸಲಾಗಿದೆ. ಯಶವಂತಪುರ ಸಂಚಾರ ಠಾಣೆ ಪೊಲೀಸರು ಸ್ಥಳ ಪರಿಶೀಲನೆ ನಡೆಸಿ, ಬಳಿಕ ವಾಹನ ತೆರವುಗೊಳಿಸಿದ್ದಾರೆ. (ದಿಗ್ವಿಜಯ ನ್ಯೂಸ್)