ಯಲಬುರ್ಗಾ: ಸಾರ್ವತ್ರಿಕ ವಿಧಾನಸಭಾ ಚುನಾವಣೆ ಹಿನ್ನೆಯಲ್ಲಿ ಕ್ಷೇತ್ರದಲ್ಲಿ ಚುನಾವಣೆ ಶಾಂತಿಯುತವಾಗಿ ನಡೆಸುವುದಕ್ಕೆ ಪ್ರತಿಯೊಬ್ಬರೂ ಸಹಕರಿಸಬೇಕು ಎಂದು ಯಲಬುರ್ಗಾ ಕ್ಷೇತ್ರದ ಚುನಾವಣಾಧಿಕಾರಿ ಕೆ.ವಿ.ಕಾವ್ಯರಾಣಿ ಹೇಳಿದರು.
ಮಾ.29ರಿಂದ ಚುನಾವಣಾ ನೀತಿ ಸಂಹಿತೆ ಜಾರಿಯಾಗಿದೆ. ಸಂವಿಧಾನದ ಆಶಯ ಪ್ರಕಾರ ಪ್ರಜಾಪ್ರಭುತ್ವದಲ್ಲಿ ಮತದಾನ ಮಾಡುವುದು ಪ್ರತಿಯೊಬ್ಬರ ಹಕ್ಕು ಎಂದು ಗುರುವಾರ ಸುದ್ದಿಗೊಷ್ಠಿಯಲ್ಲಿ ತಿಳಿಸಿದರು.
ಪಟ್ಟಣದ ತಹಸಿಲ್ ಕಂದಾಯ ಭವನದಲ್ಲಿ ಚುನಾವಣಾ ಪ್ರಕ್ರಿಯೆ ನಡೆಯಲಿದೆ. ಏ.13ರಂದು ಅಧಿಸೂಚನೆ ಹೊರಡಿಸಲಿದ್ದು, 20ಕ್ಕೆ ನಾಮಪತ್ರ ಸಲ್ಲಿಕೆ, 21 ನಾಮಪತ್ರಗಳ ಪರಿಶೀಲನೆ, 24ರಂದು ಉಮೇದುವಾರಿಕೆ ಹಿಂಪಡೆಯುವುದು, ಮೇ 10ರಂದು ಮತದಾನ, 13ಕ್ಕೆ ಚುನಾವಣೆಯ ಫಲಿತಾಂಶ ಹೊರಬೀಳಲಿದೆ. ಮೇ 15ರಂದು ಚುನಾವಣೆ ಪ್ರಕ್ರಿಯೆ ಮುಕ್ತಾಯವಾಗಲಿದೆ ಎಂದು ವಿವರಿಸಿದರು.
ಕ್ಷೇತ್ರದಲ್ಲಿ ಬನ್ನಿಕೊಪ್ಪ, ಬಂಡಿ ಕ್ರಾಸ್, ಸಂಕನೂರು ಕ್ರಾಸ್ ಬಳಿ ಚೆಕ್ಪೋಸ್ಟ್ ನಿರ್ಮಿಸಲಾಗಿದೆ. ನೀತಿ ಸಂಹಿತೆ ಜಾರಿ ಹಿನ್ನೆಲೆಯಲ್ಲಿ ಸಭೆ ಸಮಾರಂಭ ಮತ್ತು ರ್ಯಾಲಿ ನಡೆಸಲು ಕಡ್ಡಾಯವಾಗಿ ಒಂದು ದಿನ ಮುಂಚಿತವಾಗಿ ಚುನಾವಣೆ ಕಚೇರಿಯಿಂದ ಅನುಮತಿ ಪಡೆಯಬೇಕು. ಮೈಕ್, ಡಿಜೆ ಉಪಯೋಗಿಸಲು ಪೊಲೀಸ್ ಇಲಾಖೆ ಅನುಮತಿ ಕಡ್ಡಾಯ ಎಂದರು.
ಧಾರ್ಮಿಕ ಸಂಸ್ಥೆಗಳಲ್ಲಿ ಜಾತಿ, ಧರ್ಮದ ಹೆಸರಿನಲ್ಲಿ ಯಾರೂ ಪ್ರಚಾರ ಮಾಡಬಾರದು. ಒಂದು ವೇಳೆ ಯಾರೇ ನಿಯಮ ಉಲ್ಲಂಘನೆ ಮಾಡಿದರೆ ಅಂಥವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಎಲ್ಲ ಬೂತ್ಗಳಲ್ಲಿ ಕುಡಿಯುವ ನೀರು, ಶೌಚಗೃಹ, ವಿದ್ಯುತ್, ನೆರಳು ಸೇರಿ ಅಗತ್ಯ ಸೌಕರ್ಯ ಕಲ್ಪಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.
1950 ಸಹಾಯವಾಣಿ: ದೂರು ನೀಡುವವರು ಟೋಲ್ ಫ್ರೀ ಸಂಖ್ಯೆ 1950 ಕರೆ ಮಾಡಬಹುದು. ಇದಕ್ಕೆ ಸಹಾಯವಾಣಿ ಸ್ಥಾಪಿಸಲಾಗಿದೆ. ಕ್ಷೇತ್ರದಲ್ಲಿ ಮಹಿಳಾ ಸಿಬ್ಬಂದಿಗೆ ಸಖಿ ಮಾದರಿ ಮತಗಟ್ಟೆ ಸ್ಥಾಪನಯಾಗಲಿದೆ ಎಂದು ಕಾವ್ಯಾರಾಣಿ ತಿಳಿಸಿದರು.
ಮಾದರಿ ನೀತಿ ಸಂಹಿತೆ ನೋಡಲ್ ಅಧಿಕಾರಿ ಹಾಗೂ ತಾಪಂ ಇಒ ಸಂತೋಷ ಪಾಟೀಲ್, ಸಹ ಚುನಾವಣಾಧಿಕಾರಿ ತಹಸೀಲ್ದಾರ್ ವಿಠ್ಠಲ್ ಚೌಗಲೆ, ಮುರಳೀಧರ ಕುಲಕರ್ಣಿ, ಕುಕನೂರು ತಾಪಂ ಇಒ ರಾಮಣ್ಣ ದೊಡ್ಡಮನಿ, ಸಿಪಿಐ ವೀರಾರಡ್ಡಿ ಅಧಿಕಾರಿಗಳಾದ ವಿಜಯಕುಮಾರ್, ಪ್ರಕಾಶ ಮಠದ, ಪ್ರಕಾಶ ಬಾರಕೇರ್, ಸಮೀರ್ ಇತರರಿದ್ದರು.