ಯಲಬುರ್ಗಾ: ಬಾಲಕಿಯರು ಪೌಷ್ಟಿಕ ಆಹಾರ ಸೇವನೆ ಜತೆಗೆ ಉತ್ತಮ ಜೀವನ ಶೈಲಿ ರೂಪಿಸಿಕೊಳ್ಳಬೇಕು ಎಂದು ಹದಿಹರೆಯದವರ ಆರೋಗ್ಯ ಆಪ್ತ ಸಮಾಲೋಚಕ ಶರಣಪ್ಪ ಉಪ್ಪಾರ ಹೇಳಿದರು.
ಸಂಗನಾಳದ ಅನ್ನದಾನೀಶ್ವರ ಮಠದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಗ್ರಾಪಂ ಸಹಯೋಗದಲ್ಲಿ ಶನಿವಾರ ಆಯೋಜಿಸಿದ್ದ ಆರೋಗ್ಯ ತಪಾಸಣೆ ಶಿಬಿರದಲ್ಲಿ ಮಾತನಾಡಿದರು. ಹದಿಹರೆಯದವರು ಎದುರಿಸುತ್ತಿರುವ ರಕ್ತಹೀನತೆ, ಪೌಷ್ಟಿಕ ಆಹಾರ ಕೊರತೆ ನಿವಾರಣೆಗೆ ಉತ್ತಮ ಆಹಾರ ಸೇವಿಸಬೇಕು. ಋತುಚಕ್ರ ಸಂಬಂಧಿ ಶುಚಿತ್ವ, ವೈಯಕ್ತಿಕ ಸ್ವಚ್ಛತೆ ಕಾಪಾಡಿಕೊಳ್ಳಬೇಕು ಎಂದರು.
ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಅಮರೇಶ ನಾಗರಾಳ ಜೀವನ ಶೈಲಿ ಕುರಿತು ಮಾಹಿತಿ ನೀಡಿದರು. ಗ್ರಾಪಂ ಅಧ್ಯಕ್ಷೆ ಫರೀದಾ ಬೇಗಂ ಬೆಟಗೇರಿ, ಆರೋಗ್ಯ ಕೇಂದ್ರದ ನಿರೀಕ್ಷಣಾಧಿಕಾರಿ ಎಸ್.ಬಸಮ್ಮ, ಆರೋಗ್ಯ ಸಂರಕ್ಷಣಾ ಅಧಿಕಾರಿ ಶಾಂತಾದೇವಿ ದೇಸಾಯಿ, ಶಿಕ್ಷಕರಾದ ಶಿವಾನಂದ ಹೊಸಮನಿ, ನಂದಿತಾ ಹಾಗೂ ಅಂಗನವಾಡಿ, ಆಶಾ ಕಾರ್ಯಕರ್ತೆಯರು ಇದ್ದರು.