ಯಲಬುರ್ಗಾ: ನರೇಗಾ ಕೂಲಿಕಾರರು ಲೋಕಸಭೆ ಚುನಾವಣೆಯಲ್ಲಿ ಕಡ್ಡಾಯವಾಗಿ ಮತದಾನ ಮಾಡುವ ಮೂಲಕ ಪ್ರಜಾಪ್ರಭುತ್ವ ಗಟ್ಟಿಗೊಳಿಸಬೇಕು ಎಂದು ತಾಪಂ ಸಹಾಯಕ ನಿರ್ದೇಶಕ ಹನುಮಂತಗೌಡ ಪಾಟೀಲ್ ಹೇಳಿದರು.
ತಾಲೂಕಿನ ತಾಳಕೇರಿ ಗ್ರಾಪಂ ವ್ಯಾಪ್ತಿಯ ನಾಲಾ ಹೂಳೆತ್ತುವ ಕಾಮಗಾರಿ ಸ್ಥಳದಲ್ಲಿ ಸ್ವೀಪ್ ಸಮಿತಿ ಬುಧವಾರ ಹಮ್ಮಿಕೊಂಡಿದ್ದ ಮತದಾನ ಜಾಗೃತಿ ಸ್ವೀಪ್ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕಳೆದ ಚುನಾವಣೆಯಲ್ಲಿ ನಿರಂತರವಾಗಿ ಸ್ವೀಪ್ ಕಾರ್ಯಕ್ರಮ ಹಮ್ಮಿಕೊಂಡಿದ್ದರಿಂದ ಶೇ.2 ಮತದಾನ ಹೆಚ್ಚಳವಾಗಿತ್ತು. ಅದರಂತೆ ಈ ಬಾರಿಯೂ ತಾಳಕೇರಿ ಗ್ರಾಪಂ ವ್ಯಾಪ್ತಿಯಲ್ಲಿ ಹೆಚ್ಚು ಮತದಾನವಾಗಬೇಕು. ಮತದಾನ ದಿನದಂದು ನರೇಗಾ ಕೆಲಸಕ್ಕೆ ರಜೆ ನೀಡಲಾಗುವುದು ಎಂದರು.
ಚುನಾವಣೆಯಲ್ಲಿ ಕಡ್ಡಾಯವಾಗಿ ಮತಗಟ್ಟೆ ಕೇಂದ್ರಕ್ಕೆ ಹೋಗಿ ಮತ ಚಲಾಯಿಸುವುದರ ಮೂಲಕ ಸುಭದ್ರ ದೇಶವನ್ನು ಕಟ್ಟಬೇಕಿದೆ. ಮತದಾನ ದಿನದಂದು ಸಮಯ ವ್ಯರ್ಥ ಮಾಡದೆ ಚುನಾವಣೆ ಆಯೋಗ ನಿಗದಿಪಡಿಸಿದ ದಾಖಲೆ ತೆಗೆದುಕೊಂಡು ಹೋಗಿ ಹಕ್ಕು ಚಲಾಯಿಸಬೇಕು ಎಂದರು.
ಗ್ರಾಪಂ ಪಿಡಿಒ ರಮೇಶ ಹೊಸ್ಮನಿ, ತಾಪಂ ತಾಂತ್ರಿಕ ಸಂಯೋಜಕ ಸಂತೋಷ್ ನಂದಾಪುರ, ವಿಷಯ ನಿರ್ವಾಹಕ ಶೇಖಪ್ಪ ಉಪ್ಪಾರ, ಐಇಸಿ ಸಂಯೋಜಕ ಶರಣಪ್ಪ ಹಾಳಕೇರಿ, ಡಿಇಒ ಹನುಮಂತ, ಬಿಎಫ್ಟಿ ಶ್ರೀಕಾಂತ ಸಜ್ಜನ್, ಕಾಯಕ ಬಂಧುಗಳು ಇತರರಿದ್ದರು.