ಯಲಬುರ್ಗಾ: ಮಹಿಳೆಯರು ಪ್ರತಿ ಕ್ಷೇತ್ರದಲ್ಲಿ ಗುರುತಿಸಿಕೊಳ್ಳುತ್ತಿದ್ದು, ಸಂಘ-ಸಂಸ್ಥೆಗಳ ಮೂಲಕ ಸಬಲರಾಗುತ್ತಿದ್ದಾರೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವ ಹಾಲಪ್ಪ ಆಚಾರ್ ಹೇಳಿದರು.
ಪಟ್ಟಣದ ಬುದ್ಧ ಬಸವ ಅಂಬೇಡ್ಕರ್ ಭವನದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಪೌಷ್ಟಿಕ ಹಬ್ಬ ಹಾಗೂ ತಾಲೂಕು ಮಟ್ಟದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಸಮಾಜದಲ್ಲಿ ಮಹಿಳೆಗೆ ಮನ್ನಣೆ, ಗೌರವ ಇದೆ. ಅಪೌಷ್ಟಿಕ ತೊಲಗಲು ಸರ್ಕಾರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮೂಲಕ ಹಲವಾರು ಯೋಜನೆ ಜಾರಿಗೊಳಿಸಿದೆ. ಮುಂದಿನ ಪೀಳಿಗೆಯ ಆರೋಗ್ಯಯುತ ಜೀವನಕ್ಕೆ ಸರ್ಕಾರ ಸಮಾಜದ ಕಟ್ಟಕಡೆಯ ತಾಯಿ, ಮಗುವಿಗೂ ಗುಣಮಟ್ಟದ ಆಹಾರ ತಲುಪುವಂತೆ ಮಾಡುತ್ತಿದೆ. ಬಜೆಟ್ನಲ್ಲಿ ಅಂಗನವಾಡಿ ಕಾರ್ಯಕರ್ತರಿಗೆ 500 ರೂ., ಬಿಸಿಯೂಟ ಸಿಬ್ಬಂದಿಗೆ 2000 ರೂ. ವೇತನ ಹೆಚ್ಚಳ ಮಾಡಲಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಕೆಎಚ್ಪಿಟಿಯಿಂದ ಸಾಂಕೇತಿಕವಾಗಿ ಕಲ್ಲೂರ ಗ್ರಾಪಂ ಗ್ರಂಥಾಲಯಕ್ಕೆ 585 ಪುಸ್ತಕ ವಿತರಿಸಲಾಯಿತು. ತಹಸೀಲ್ದಾರ್ ವಿಠ್ಠಲ ಚೌಗಲೆ, ತಾಪಂ ಇಒ ಸಂತೋಷ ಪಾಟೀಲ್, ವೀರಶೈವ ಅಭಿವೃದ್ಧಿ ನಿಗಮದ ನಿರ್ದೇಶಕ ಅಮರೇಗೌಡ ಮಾಲಿಪಾಟೀಲ್, ಪಪಂ ಅಧ್ಯಕ್ಷ ಅಮರೇಶ ಹುಬ್ಬಳ್ಳಿ, ಜಿಲ್ಲಾ ಕಾರ್ಮಿಕ ನಿರೀಕ್ಷಕಿ ಸುಧಾ ಗರಗ, ಕೆಎಚ್ಪಿಟಿ ಜಿಲ್ಲಾ ಸಂಯೋಜಕ ಮಂಜುನಾಥ ದೊಡ್ಡಬೊಲೆ, ಬಿಇಒ ಪದ್ಮನಾಭ ಕರ್ಣಂ, ಕೋವಿಡ್ ಜಿಲ್ಲಾ ಸಂಯೋಜಕ ಸಿದ್ದಲಿಂಗಯ್ಯ ಚೌಕಿ, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಎಫ್.ಎಂ.ಕಳ್ಳಿ, ಸಿಡಿಪಿಒ ಸಿಂಧು ಎಲಿಗಾರ, ಆರೋಗ್ಯ ನಿರೀಕ್ಷಣಾಧಿಕಾರಿ ಚನ್ನಬಸಯ್ಯ ಸರಗಣಚಾರಿ ಇತರರಿದ್ದರು.