ಯಲಬುರ್ಗಾ: ತಾಲೂಕಿನ ರೈತರು ಬರ ಪರಿಹಾರದ ಲಾಭ ಪಡೆಯಲು ಕಡ್ಡಾಯವಾಗಿ ಎಫ್ಐಡಿ ಮಾಡಿಸಬೇಕೆಂದು ಸಹಾಯಕ ಕೃಷಿ ನಿರ್ದೇಶಕ ಪ್ರಾಣೇಶ ಹಾದಿಮನಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ತಾಲೂಕಿನಲ್ಲಿ 69,302 ಹಾಗೂ ಕುಕನೂರು ತಾಲೂಕಿನಲ್ಲಿ 54,112 ರೈತರ ತಾಕುಗಳು ಭೂಮಿ ಪ್ರಕಾರ ದಾಖಲಾಗಿರುತ್ತವೆ. ಇವುಗಳಲ್ಲಿ ಯಲಬುರ್ಗಾ ತಾಲೂಕಿನ 49,187 ರೈತರ ತಾಕುಗಳು ಹಾಗೂ ಕುಕನೂರು ತಾಲೂಕಿನ 39,899 ರೈತರ ತಾಕುಗಳು ಎಫ್ಐಡಿ ಜೋಡಣೆಯಾಗಿವೆ. ಅವಳಿ ತಾಲೂಕಿನ 34,325 ರೈತರ ತಾಕುಗಳು ಎಫ್ಐಡಿ ಜೋಡಣೆಯಾಗಿಲ್ಲ.
2023-24ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಬರ ಪರಿಹಾರಕ್ಕಾಗಿ ಕೂಡಲೇ ಜೋಡಣೆ ಮಾಡಬೇಕು. ಅಲ್ಲದೇ ಬ್ಯಾಂಕ್ಗಳಲ್ಲಿ ಸಾಲದ ಸೌಲಭ್ಯ ಪಡೆಯಲು, ಬೆಳೆ ವಿಮೆ, ಪಿಎಂ ಕಿಸಾನ್ ಯೋಜನೆ, ಕಂದಾಯ, ಪಶುಸಂಗೋಪನೆ, ಮೀನುಗಾರಿಕೆ, ತೋಟಗಾರಿಕೆ ಹಾಗೂ ವಿವಿಧ ಇಲಾಖೆಗಳ ಯೋಜನೆ ಲಾಭ ಪಡೆಯಲು ಎಫ್ಐಡಿ ಅವಶ್ಯಕ. ಎಫ್ಐಡಿ ಮಾಡಿಸದೇ ಇರುವ ರೈತರು ಬರ ಪರಿಹಾರ ಹಾಗೂ ಇತರ ಇಲಾಖೆಗಳ ಯೋಜನೆಗಳ ಸೌಲಭ್ಯಗಳಿಂದ ವಂಚಿತರಾಗುವ ಸಾಧ್ಯತೆ ಇದೆ.
ಎಫ್ಐಡಿ ಎಲ್ಲಿ ಮಾಡಿಸಬಹುದು: ಹೊಸದಾಗಿ ಎಫ್ಐಡಿ ಮಾಡಿಸಲು ರೈತರು ಕೃಷಿ, ಕಂದಾಯ, ತೋಟಗಾರಿಕೆ, ಆಹಾರ ಇಲಾಖೆ, ಎಎಂಎಫ್ ಹಾಗೂ ಇತರ ಇಲಾಖೆಗಳಿಗೆ ಭೇಟಿ ನೀಡಿ ಬ್ಯಾಂಕ್ ಪಾಸ್ ಪುಸ್ತಕ, ಆಧಾರ್ ಕಾರ್ಡ್, ಭಾವಚಿತ್ರ, ರೈತರ ತಾಕುಗಳ ಎಲ್ಲ ಪಹಣಿ ಪ್ರತಿ ದಾಖಲೆಗಳನ್ನು ಸಲ್ಲಿಸಿ ಜೋಡಣೆ ಮಾಡಿಸಬೇಕೆಂದು ತಿಳಿಸಿದ್ದಾರೆ.