ಶ್ರೀ ವಿಜಯ ಮಹಾಂತೇಶ್ವರ ಸ್ವಾಮೀಜಿ ವಿರಾಜಮಾನ | ಭಕ್ತರಲ್ಲಿ ಸಂಭ್ರಮ
ಯಲಬುರ್ಗಾ: ಪಟ್ಟಣದ ಶ್ರೀಧರಮುರಡಿ ಹಿರೇಮಠದ ಶ್ರೀ ಬಸವಲಿಂಗೇಶ್ವರ ಸ್ವಾಮೀಜಿಯವರ 18ನೇ ವರ್ಷದ ಪೀಠಾರೋಹಣದ ಸಮಾರೋಪ ನಿಮಿತ್ತ ಸೋಮವಾರ ಅಡ್ಡಪಲ್ಲಕ್ಕಿ ಮಹೋತ್ಸವ ಸಂಭ್ರಮದಿಂದ ಜರುಗಿತು.
ಶ್ರೀಧರ ಮುರಡಿ ಮಠದ ಲಿ.ಶ್ರೀ ಬಸವಲಿಂಗೇಶ್ವರ ಶಿವಾಚಾರ್ಯ ಸ್ವಾಮೀಜಿಯವರ ಕತೃ ಗದ್ದುಗೆಗೆ ವಿಶೇಷ ಧಾರ್ಮಿಕ ಪೂಜೆ ನೆರವೇರಿಸಲಾಯಿತು.
ಇದೇ ಸಂದರ್ಭ ಕುದರಿಮೋತಿಯ ಸಂಸ್ಥಾನ ಮೈಸೂರು ಮಠದ ಶ್ರೀ ವಿಜಯ ಮಹಾಂತೇಶ್ವರ ಸ್ವಾಮೀಜಿಯವರ ಅಡ್ಡಪಲ್ಲಕ್ಕಿ ಜರುಗಿತು. ಪಟ್ಟಣದ ವಿವಿಧ ವೃತ್ತಗಳಲ್ಲಿ ಕುಂಭ ಕಳಸ ಹಾಗೂ ವಾದ್ಯ ವೈಭವದೊಂದಿಗೆ ಸ್ವಾಮೀಜಿಯವರ ಅಡ್ಡಪಲ್ಲಕ್ಕಿ ಮೆರವಣಿಗೆ ಸಾಗಿತು. ನಾಲ್ಕು ಜೋಡಿ ಸಾಮೂಹಿಕ ವಿವಾಹ ಜರುಗಿತು. ಶ್ರೀಧರಮುರಡಿ ಹಿರೇಮಠದ ಶ್ರೀ ಬಸವಲಿಂಗೇಶ್ವರ ಸ್ವಾಮೀಜಿ, ನಿಡೋಣಿಯ ಎರಡೆತ್ತಿನಮಠದ ಶ್ರೀ ಸಿದ್ಧಲಿಂಗ ಸ್ವಾಮೀಜಿ, ಜಿಗೇರಿಯ ಗುರುಸಿದ್ಧೇಶ್ವರ ಸ್ವಾಮೀಜಿ, ಚಿಕ್ಕಮ್ಯಾಗೇರಿ-ಇಟಗಿಯ ಗುರುಶಾಂತವೀರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.
ಪ್ರಮುಖರಾದ ಮುನಿಯಪ್ಪ ಹುಬ್ಬಳ್ಳಿ, ಕಳಕನಗೌಡ ಜುಮಲಾಪುರ, ಶಿವಕುಮಾರ ಭೂತೆ, ವೀರಣ್ಣ ಹುಬ್ಬಳ್ಳಿ ಸೇರಿ ಇತರರು ಇದ್ದರು.