More

    ಜೈಲಿನಲ್ಲಿ ಮರದ ಚೂರಿ ತಯಾರಿ!,  ದಾಳಿಗೆ ಚೂರಿಯಂತೆ ಬಳಸಿದ ಕೈದಿಗಳು

    ಮಂಗಳೂರು: ಮಂಗಳೂರಿನ ಜಿಲ್ಲಾ ಕಾರಾಗೃಹದೊಳಗೆ ಇದ್ದ ಸೊತ್ತುಗಳನ್ನು ಬಳಸಿ ಕೈದಿಗಳು ಮರದ ಚೂರಿ ಮಾದರಿಯ ಮಾರಾಕಾಸ್ತ್ರಗಳನ್ನು ತಯಾರು ಮಾಡಿಟ್ಟುಕೊಂಡಿದ್ದರು ಎಂದು ಮಂಗಳೂರು ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ತಿಳಿಸಿದ್ದಾರೆ.

    ಭಾನುವಾರ ಕಾರಾಗೃಹಕ್ಕೆ ಭೇಟಿ ನೀಡಿದಾಗ ಕೇರಂ ಬೋರ್ಡ್‌ನ ಫ್ರೇಮನ್ನೇ ಹರಿತವಾದ ಆಯುಧವನ್ನಾಗಿ ಮಾಡಿ ಅದನ್ನು ಚೂರಿ ರೀತಿಯಲ್ಲಿ ಬಳಸಿರುವುದು ಗಮನಕ್ಕೆ ಬಂದಿದೆ. ಅಲ್ಲದೆ ಟ್ಯೂಬ್‌ಲೈಟ್ ಪುಡಿ ಶೇಖರಿಸಿ ಅದನ್ನು ಬಟ್ಟೆಯೊಳಗಿರಿಸಿ ಅದರಿಂದ ದಾಳಿ ಮಾಡಲು ತಂತ್ರಗಾರಿಕೆ ರೂಪಿಸಿರುವುದು ಕೂಡ ಗೊತ್ತಾಗಿದೆ ಎಂದು ತಿಳಿಸಿದ್ದಾರೆ.

    5 ಪ್ರಕರಣ ದಾಖಲು: ಕಾರಾಗೃಹದಲ್ಲಿ ನಡೆದ ಹಲ್ಲೆ ಘಟನೆಗೆ ಸಂಬಂಧಿಸಿದಂತೆ ಒಟ್ಟು 5 ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗಿದೆ. ಪ್ರಮುಖ ಆರೋಪಿ ಸಮೀರ್‌ನ ವಿರುದ್ಧ ಈಗಾಗಲೇ ಕೊಲೆಯತ್ನ, ದರೋಡೆ, ಕಳ್ಳತನ ಸೇರಿದಂತೆ 10ಕ್ಕೂ ಅಧಿಕ ಪ್ರಕರಣಗಳಿವೆ. ಈತ ಈ ಹಿಂದೆ ಎಎಸ್‌ಐ ಮೇಲೆ ರಾಡ್‌ನಿಂದ ಹಲ್ಲೆ ನಡೆಸಿದ್ದ. ಅನ್ಸಾರ್ ಕೂಡ ಪೊಲೀಸರ ಮೇಲೆ ಹಲ್ಲೆಗೆ ಯತ್ನಿಸಿದ್ದ ಆರೋಪಿಯಾಗಿದ್ದಾನೆ. ಸಮೀರ್‌ನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು ನ್ಯಾಯಾಲಯವು ಆತನಿಗೆ ನ್ಯಾಯಾಂಗ ಬಂಧನ ವಿಧಿಸಿದೆ. ಸಮೀರ್ ಮತ್ತು ಇತರ 20 ಮಂದಿ ಕೈದಿಗಳನ್ನು ಬೇರೆ ಜಿಲ್ಲೆಗಳ ಕಾರಾಗೃಹಗಳಿಗೆ ಸ್ಥಳಾಂತರಿಸಲಾಗಿದೆ. ಕಾರಾಗೃಹದಲ್ಲಿ ಯಾವ ಕಾರಣಕ್ಕೆ ಹಲ್ಲೆ ನಡೆದಿದ್ದೆ ಎಂಬುದು ಸ್ಪಷ್ಟವಾಗಿಲ್ಲ. ಅಗತ್ಯವಾದರೆ ಆರೋಪಿಯನ್ನು ಪೊಲೀಸ್ ಕಸ್ಟಡಿಗೆ ಪಡೆದು ವಿಚಾರಿಸಲಾಗುವುದು ಎಂದವರು ತಿಳಿಸಿದರು.

    ಕೈದಿಗಳಿಂದ ಸೇವೆ ಮಾಡಿಸಿಕೊಳ್ಳುತ್ತಿದ್ದ: ಸಮೀರ್ ಕಳೆದ ಜೂನ್‌ನಿಂದ ಮಂಗಳೂರು ಕಾರಾಗೃಹದಲ್ಲಿದ್ದು ಆತ ಇತರ ಕೈದಿಗಳನ್ನು ಬೆದರಿಸಿ ಆತನ ಗ್ಯಾಂಗ್‌ಗೆ ಸೇರಿಸಿಕೊಳ್ಳುತ್ತಿದ್ದ. ಅನಂತರ ಅವರನ್ನು ತನ್ನ ಕೈ, ಕಾಲು ಒತ್ತುವುದು ಮೊದಲಾದ ಸೇವೆಗಳಿಗೂ ಬಳಸಿಕೊಳ್ಳುತ್ತಿದ್ದ. ಭಾನುವಾರ ನಡೆದ ಹಲ್ಲೆ ಪ್ರಕರಣದಲ್ಲಿ ಆತನ ಗ್ಯಾಂಗ್ ಸೇರಿದವರು ಕೂಡ ಕೆಲವರು ಇದ್ದರು ಎಂದು ಆಯುಕ್ತರು ತಿಳಿಸಿದ್ದಾರೆ.

    ಜೈಲರ್ ಮೇಲೆಯೇ ಹಲ್ಲೆ:  ನಗರದ ಕಾರಾಗೃಹದಲ್ಲಿ ಭಾನುವಾರ ವಿಚಾರಣಾಧೀನ ಕೈದಿಗಳ ಹೊಡೆದಾಟದ ವೇಳೆ ಜೈಲರ್ ಮೇಲೆಯೇ ಕೈದಿಗಳು ಸೇರಿಕೊಂಡು ಹಲ್ಲೆ ನಡೆಸಿರುವ ವಿಚಾರವೀಗ ಬಹಿರಂಗಗೊಂಡಿದೆ. ಜೈಲಿನಲ್ಲಿ ಬೆಳಗ್ಗೆ ಉಪಹಾರ ವಿತರಣೆ ಸಂದರ್ಭ ವಿಚಾರಣಾಧೀನ ಕೈದಿ ಸಮೀರ್ ಎಂಬಾತ ವಿಚಾರಣಾಧೀನ ಕೈದಿಗಳಾದ ಅನ್ಸಾರ್ ಹಾಗೂ ಝೈನುದ್ದೀನ್ ಮೇಲೆ ಹಲ್ಲೆ ನಡೆಸಿದ್ದು, ಈ ಸಂದರ್ಭ ಇತ್ತಂಡಗಳ ಮಧ್ಯೆ ಹೊಡೆದಾಟ ನಡೆದಿತ್ತು. ಕೂಡಲೇ ಮಂಗಳೂರು ನಗರ ಪೊಲೀಸ್ ಕಮಿಷನರ್ ಎನ್. ಶಶಿಕುಮಾರ್, ಡಿಸಿಪಿ ಹರಿರಾಮ್ ಶಂಕರ್, ಬರ್ಕೆ ಠಾಣಾ ಇನ್‌ಸ್ಪೆಕ್ಟರ್ ಜ್ಯೋತಿರ್ಲಿಂಗ ಹಾಗೂ ಇತರ ಪೊಲೀಸರು ಜೈಲಿಗೆ ಆಗಮಿಸಿದ್ದರು. ಜೈಲರ್ ಚಂದನ್ ಪಾಟೀಲ್ ಅವರ ತಲೆಗೆ ಗಂಭೀರ ಗಾಯವಾಗಿದ್ದು, ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಒಂದು ಮೂಲದ ಪ್ರಕಾರ ಕಮಿಷನರ್ ಅವರ ಮೇಲೆಯೂ ಕೈದಿಗಳು ಹಲ್ಲೆ ನಡೆಸಿರುವುದಾಗಿ ಹೇಳಲಾಗಿದ್ದರೂ ಅವರು ಅದನ್ನು ಖಚಿತಪಡಿಸಿಲ್ಲ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts